ಮಡಿಕೇರಿ: ಹರಿಯುತ್ತಿರುವ ತೋಡಿನಲ್ಲಿ ಕಾಡಾನೆಯೊಂದು ಮರಿಯಾನೆಗೆ ಜನ್ಮವಿತ್ತ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಏಳನೇ ಹೊಸಕೋಟೆ ತೊಂಡೂರು ಕೃಷ್ಣ ದೇವಸ್ಥಾನದ ಸಮೀಪ ನಡೆದಿದೆ.
ಸುಂಟಿಕೊಪ್ಪ ಹೋಬಳಿಯ ತೊಂಡೂರು ಗ್ರಾಮದ ಕೃಷ್ಣ ದೇವಾಲಯದ ಬಳಿಯ ತೋಡಿನಲ್ಲಿ ನಿನ್ನೆ ಮಧ್ಯರಾತ್ರಿ ಕಾಡಾನೆಯೊಂದು ಪ್ರಸವ ವೇದನೆಯಿಂದ ನರಳಿ ಕೊನೆಗೆ ಮರಿ ಆನೆಗೆ ಜನ್ಮವಿತ್ತಿದೆ. ಆದರೆ ಕರುಳಕುಡಿಯನ್ನು ಮೇಲಕ್ಕೆತ್ತಲು ಹರಸಾಹಸಪಟ್ಟ ತಾಯಿ ಮರಿಯಾನೆಯನ್ನು ರಕ್ಷಿಸಲು ಸಾಧ್ಯವಾಗದೇ ಘೀಳಿಡತೊಡಗಿದೆ. ಇದನ್ನೂ ಓದಿ: ಇನ್ನೂ ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದು ಸುಪ್ರೀಂ
ಸ್ಥಳೀಯರು ಸ್ಥಳಕ್ಕೆ ತೆರಳಿದಾಗ ಪರಿಸ್ಥಿತಿಯ ಗಂಭೀರತೆ ಅರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರದ ಅರಣ್ಯ ಇಲಾಖೆಯ ವಲಯಾಧಿಕಾರಿ ಅನನ್ಯ ಕುಮಾರ್, ಉಪವಲಯ ಅರಣ್ಯಾಧಿಕಾರಿ ಕೆ.ಪಿ.ರಂಜನ್ ದೇವಯ್ಯ, ಅರಣ್ಯ ರಕ್ಷಕ ಸಿದ್ರಾಮ್ಮ ಅಲ್ಲಿನ ಗಂಭೀರತೆಯನ್ನು ಅರಿತು ಪಟಾಕಿಯನ್ನು ಸಿಡಿಸಿ ತಾಯಿಯಾನೆಯನ್ನು ಪಕ್ಕದ ಕಾಡಿನೊಳಗೆ ಓಡಿಸಲಾಯಿತು.
ಮರಿಯಾನೆ ನೀರು ಕುಡಿದಿದ್ದರಿಂದ ಮೇಲೆ ಏಳಲಾಗದೇ ಕೊನೆಯುಸಿರೆಳೆದಿದೆ. ಅರಣ್ಯ ವೈದ್ಯಾಧಿಕಾರಿ ಚಿಟ್ಟಿಯಪ್ಪ ಶಿಶು ಮರಿಯಾನೆ ಮರಣೋತ್ತರ ಪರೀಕ್ಷೆ ನಡೆಸಿದರು.