ಚಿಕ್ಕಮಗಳೂರು: ವಾರದ ಹಿಂದೆ ರಸ್ತೆ ಮಧ್ಯೆ ಒಂಟಿ ಸಲಗವನ್ನ ಕಂಡ ಚಾಲಕ ಕೆಎಸ್ಆರ್ಟಿಸಿ ಬಸ್ಸನ್ನು ಒಂದು ಕಿ.ಮೀ. ಹಿಮ್ಮುಖವಾಗಿ ಓಡಿಸಿ ಪ್ರಯಾಣಿಕರ ಆತಂಕವನ್ನ ದೂರ ಮಾಡಿದ್ದರು. ಇದೀಗ ಮತ್ತದೇ ಸಂತವೇರಿ ಘಾಟ್ನಲ್ಲಿ ಹಣ್ಣಿನ ಟೆಂಪೋವನ್ನು ಕಾಡಾನೆ ಅಡ್ಡ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸಂತವೇರಿ ಘಾಟ್ನಲ್ಲಿ ಸಾಗುತ್ತಿದ್ದ ಹಣ್ಣಿನ ಟೆಂಪೋವೊಂದನ್ನ ಅಡ್ಡಗಟ್ಟಿದ ಕಾಡಾನೆ ವಾಹನದಲ್ಲಿದ್ದ ಹಣ್ಣನ್ನ ತಿಂದಿದೆ. ಬಳಿಕ ಟೆಂಪೋವನ್ನ ರಸ್ತೆ ಬದಿಗೆ ನೂಕಿದೆ.
ರಸ್ತೆ ಮಧ್ಯೆ ಒಂಟಿ ಸಲಗವನ್ನು ಕಂಡ ಚಾಲಕ ಹಾಗೂ ಕ್ಲೀನರ್ ಟೆಂಪೋವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಹದಿನೈದು ದಿನದ ಹಿಂದೆಯೂ ಇದೇ ಮಾರ್ಗದಲ್ಲಿ ರಸ್ತೆ ಮಧ್ಯೆ ನಿಂತಿದ್ದ ಒಂಟಿ ಸಲಗವನ್ನ ಕಂಡು ಪ್ರವಾಸಿಗರು ಆತಂಕಗೊಂಡು 40 ಕಿ.ಮೀ. ವಾಪಸ್ ಬಂದು, ಚಿಕ್ಕಮಗಳೂರು ಮೂಲಕ ಶಿವಮೊಗ್ಗ ತಲುಪಿ ತಮ್ಮ ಪ್ರಯಾಣ ಮುಂದುವರಿಸಿದ್ದರು.
ಮಲ್ಲೇನಹಳ್ಳಿ ಸುತ್ತಮುತ್ತ ಕಾಡಾನೆ ದಾಳಿಗೆ ಕಳೆದ ಮೂರು ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆನೆಗಳ ಹಾವಳಿಗೆ ಬೇಸತ್ತಿರುವ ಸ್ಥಳೀಯರು ಆನೆಗಳನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ ಬಿದಿರು ತಿನ್ನುವ ಆಸೆಗೆ ಕಾಡಂಚಿನ ರಸ್ತೆಯಲ್ಲಿ ಠಿಕಾಣಿ ಹೂಡಿರೋ ಕಾಡಾಣೆಯಿಂದ ಜನಸಾಮಾನ್ಯರು ಹೈರಾಣಾಗಿದ್ದು, ಸಂತವೇರಿ ಘಾಟ್ ಮಾರ್ಗದಲ್ಲಿ ಜನರು ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ.
https://www.youtube.com/watch?v=afOhLRWdGW0