ಬೆಂಗಳೂರು: ಉದ್ಯೋಗ ಅರಿಸಿ ದೂರದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವಕನೊಬ್ಬ ಕೆಲಸಕ್ಕೆ ಸೇರಿದ ದಿನವೇ ಸಾವನ್ನಪ್ಪಿದ್ದಾನೆ.
ರಾಣೆಬೆನ್ನೂರು ಮೂಲದ ಪ್ರಕಾಶ್ ಸಾವನ್ನಪ್ಪಿದ ಯುವಕ, ಊರಿನಲ್ಲಿ ಕೆಲಸವಿಲ್ಲದ ಹಿನ್ನೆಲೆ ಪ್ರಕಾಶ್ ಕೆಲಸ ಅರಸಿ ಬೆಂಗಳೂರಿನ ರಾಜಗೋಪಾಲನಗರಕ್ಕೆ ಬಂದಿದ್ದ. ಬೆಂಗಳೂರಿನಲ್ಲಿಯೂ ಯಾವುದೇ ಕೆಲಸ ಸಿಗದ ಹಿನ್ನೆಲೆ ಲೈನ್ ಮ್ಯಾನ್ ಕಂಟ್ರಾಕ್ಟರ್ ಆಗಿದ್ದ ವ್ಯಕ್ತಿಯೊಬ್ಬರ ಬಳಿ ಕೆಲಸಕ್ಕೆ ಸೇರಿದ್ದನು.
ಸೇರಿದ ಮೊದಲ ದಿನವೇ, ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದಾನೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ರಿಪೇರಿ ಕೆಲಸಕ್ಕಾಗಿ ಯುವಕನನ್ನು ಕಂಬ ಹತ್ತಿಸಿದ್ದಾರೆ. ಪ್ರಕಾಶ್ ಹತ್ತಿದ ಕಂಬದ ವೈರ್ ಗಳಲ್ಲಿ ವಿದ್ಯುತ್ ಇರಲಿಲ್ಲ. ಆದರೆ ಅದೇ ಕಂಬದಲ್ಲಿ ಮತ್ತೊಂದು ಏರಿಯಾಗೆ ಹೋಗುವ ವೈರಿನಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ವಿದ್ಯುತ್ ಸಂಪರ್ಕ ಇರುವ ವಿಚಾರ ತಿಳಿಯದೇ ಪ್ರಕಾಶ್ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ.
ಈ ವೇಳೆ ಮತ್ತೊಂದು ಏರಿಯಾಗೆ ಕನೆಕ್ಟ್ ಆಗಿದ್ದ ವೈರಿನಿಂದ ಶಾಕ್ ಹೊಡೆದು ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.