ತುಮಕೂರು: ಉಚಿತ ಭಾಗ್ಯಗಳನ್ನು ಕೊಟ್ಟು ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದ್ಯಾ? ಹೌದು ಎನ್ನುತ್ತಿದೆ ಈ ಸುದ್ದಿ. ಕನಿಷ್ಠ ಕರೆಂಟ್ ಬಿಲ್ (Electricity Bill) ಕಟ್ಟಲೂ ಸರ್ಕಾರದ ಬಳಿ ಹಣ ಇಲ್ಲ. ಹೀಗಾಗಿ ಬೆಸ್ಕಾಂ (BESCOM) ಈಗ ಅಂಗನವಾಡಿ (Anganwadi) ಕೇಂದ್ರಗಳ ಪ್ಯೂಸ್ ಕಿತ್ತು ಶಾಕ್ ನೀಡಿದೆ.
ಐದು ಗ್ಯಾರಂಟಿಗಳ (Congress Guarantee) ಬೆನ್ನು ಹತ್ತಿದ್ದ ಸರ್ಕಾರಕ್ಕೆ ಅದೇ ಗ್ಯಾರಂಟಿಗಳು ಈಗ ಬಿಸಿ ತುಪ್ಪವಾಗಿ ಪರಣಮಿಸುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿಗಳ ಬಾಡಿಗೆ ಕಟ್ಟದೇ ಮುಖಭಂಗಕ್ಕೆ ಒಳಗಾದ ಸರ್ಕಾರ ಈಗ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ. ಸರ್ಕಾರದ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ವಿದ್ಯುತ್ ಬಿಲ್ ಪಾವತಿಸದ ಪರಿಣಾಮ ಬೆಸ್ಕಾಂನವರು ಈಗ ಪ್ಯೂಸ್ ಕಿತ್ತಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಎಣ್ಣೆ ಶಾಕ್ ಫಿಕ್ಸ್ – ಕೆಳ ವರ್ಗದ ಜನ ಅತೀ ಹೆಚ್ಚು ಸೇವಿಸುವ ಮದ್ಯದ ದರ ಭಾರೀ ಏರಿಕೆ
ತುಮಕೂರು (Tumakuru) ಜಿಲ್ಲೆಯ ಬರೊಬ್ಬರಿ 270 ಅಂಗನವಾಡಿ ಕೇಂದ್ರಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಜಿಲ್ಲೆಯ ಒಟ್ಟು 3 ಸಾವಿರ ಅಂಗನವಾಡಿ ಕೇಂದ್ರಗಳಿಗೆ ಕಳೆದ 6 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಯಾಗಿಲ್ಲ. ಪ್ರತಿ ತಿಂಗಳು 3 ಲಕ್ಷ ರೂ. ನಂತೆ ಒಟ್ಟು 18 ಲಕ್ಷ ರೂ. ಬಿಲ್ ಬಾಕಿ ಇದೆ. ಬಿಲ್ ಪಾವತಿಸುವಂತೆ ನೋಟಿಸ್ ಕೊಟ್ಟರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ಯಾರೇ ಅಂದಿಲ್ಲ. ಹಾಗಾಗಿ ಬೆಸ್ಕಾಂ ಈಗ ಪ್ಯೂಸ್ ಕಿತ್ತು ಬಿಸಿ ಮುಟ್ಟಿಸಿದೆ. ಇದನ್ನೂ ಓದಿ: ಕೃಷಿ ಉಪಕರಣಗಳ ಬೆಲೆ ದುಪ್ಪಟ್ಟು – ಅಂದು 30 ಪೈಪ್, 5 ಸ್ಪ್ರಿಂಕ್ಲರ್ಗೆ 1,876 ರೂ. – ಈಗ 4,667 ರೂ.ಗೆ ಏರಿಕೆ
ಕಳೆದ ಎರಡು ತಿಂಗಳಿನಿಂದ ಅಂಗನವಾಡಿ ಕೇಂದ್ರಗಳು ಕತ್ತಲೆಯಲ್ಲಿ ಮುಳುಗಿದೆ. ಅಂಗನವಾಡಿ ಕೇಂದ್ರಗಳ ಫ್ಯಾನ್ ತಿರುಗುತ್ತಿಲ್ಲ, ಮಿಕ್ಸಿ ರುಬ್ಬುತ್ತಿಲ್ಲ. ಬಲ್ಬ್ ಉರಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಈ ಧೋರಣೆಗೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ನಮಗೆ ಉಚಿತ ಏನೂ ಕೊಡುವುದು ಬೇಡ. ನಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಏರಿಕೆ – ಸರ್ಕಾರದಿಂದ ಸುಳಿವು
ಇನ್ನೊಂದು ಕಡೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಸಿಮ್ ರಿಚಾರ್ಜ್ ಮಾಡಲೂ ಸರ್ಕಾರದ ಬಳಿ ದುಡ್ಡಿಲ್ಲ ಎನ್ನಲಾಗಿದೆ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಖಾಸಗಿ ಸಂಖ್ಯೆಯಿಂದ ವ್ಯವಹರಿಸುವಂತಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತು ಅಂಗನವಾಡಿ ಕೇಂದ್ರಗಳ ಸಮಸ್ಯೆ ಬಗೆಹರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.