ಆತ್ಮಸಾಕ್ಷಿ ಇಲ್ಲದ ಬಿಜೆಪಿ ಸರ್ಕಾರಕ್ಕೆ ಹಣ ಮಾಡುವುದೇ ದಂಧೆ ಆಗಿದೆ: ಎಚ್‍ಡಿಕೆ

Public TV
1 Min Read
BJP AND HDK

ಬೆಂಗಳೂರು: ಜನರ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Electricity 1

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಸರ್ಕಾರಗಳು ಬಡವರ ಮೇಲೆ ಬೆಲೆ ಏರಿಕೆ ಸಮರ ಸಾರಿವೆ. ಬಿಜೆಪಿ ಬೆಲೆ ಏರಿಕೆಯ ಮಾರಣಕಾಂಡ ಮುಂದುವರೆದಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯ ಜೊತೆ ಜೊತೆಗೇ, ಈಗ ಕರೆಂಟ್ ಶಾಕ್ ಅನ್ನೂ ಕೊಟ್ಟಿದೆ. ಆತ್ಮಸಾಕ್ಷಿ ಇಲ್ಲದ ಸರ್ಕಾರಕ್ಕೆ ಹಣ ಮಾಡುವುದೇ ದಂಧೆ ಆಗಿಬಿಟ್ಟಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ವಿದ್ಯುತ್ ಶಾಕ್ – ಯೂನಿಟ್‍ಗೆ 35 ಪೈಸೆ ಹೆಚ್ಚಳ

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಿ, ಸರಿಯಾಗಿ ವಿದ್ಯುತ್ ಪೂರೈಕೆ ಮಾಡದ ಸರ್ಕಾರ, ಪ್ರತಿ ಯೂನಿಟ್‍ಗೆ 35 ಪೈಸೆ ಹೆಚ್ಚಳ ಮಾಡಿದೆ. ಗುಣಮಟ್ಟದ ವಿದ್ಯುತ್ ಕೊಡಲು ಕೈಲಾಗದ ಸರ್ಕಾರವು ಬೆಲೆ ಏರಿಕೆಯಲ್ಲಿ ಮಾತ್ರ ರಾಕೆಟ್ ವೇಗದಲ್ಲಿದೆ. ಬಡವರು ಮನೆ ಕಟ್ಟುವ ಹಾಗಿಲ್ಲ, ಹೊಟ್ಟೆ ತುಂಬಾ ಊಟ ಮಾಡುವಂತಿಲ್ಲ, ಬಡವ ಈಗ ಬೆಳಕಲ್ಲಿಯೂ ಇರುವಂತಿಲ್ಲ. ಬಡವರ ವಿರುದ್ಧ ಬಿಜೆಪಿ ಬೆಲೆ ಏರಿಕೆ ಸಮರ ಹೂಡಿದೆಯಾ ಎನ್ನುವ ಅನುಮಾನ ನನ್ನದು ಎಂದು ವಾಗ್ದಾಳಿ ನಡೆಸಿದ್ದಾರೆ.

BJP FLAG

ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಇಲ್ಲದೆ ಬೀದಿಯಲ್ಲಿದ್ದಾರೆ. ರಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಜನರನ್ನು ಬೆಲೆ ಏರಿಕೆ ಬಿಸಿಗೆ ಸಿಲುಕಿಸಿ ಬೆಲೆ ಬಾರುಕೋಲು ಅಭಿಯಾನವನ್ನು ಬಿಜೆಪಿ ಸರ್ಕಾರ ಶುರು ಮಾಡಿದೆ. ಲೋಡ್ ಶೆಡ್ಡಿಂಗ್ ತೆಗೆದು ಗುಣಮಟ್ಟದ ವಿದ್ಯುತ್ ಪೂರೈಕೆ ಸರ್ಕಾರದ ಕರ್ತವ್ಯ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಧ್ವನಿವರ್ದಕದ ವಿಷಯ ತೀರ್ಮಾನ ಮಾಡಿ ನಿಗದಿ ಮಾಡಿದ್ದಾರೆ: ಡಿ.ಕೆ ಶಿವಕುಮಾರ್

ವಿದ್ಯುತ್ ಕೊರತೆಯೇ ಇಲ್ಲ ಎನ್ನುವ ಸರ್ಕಾರ, ಈಗ ದರ ಏರಿಕೆ ಮಾಡಿದ್ದು ಏಕೆ? ಜನರ ಮೇಲೆ ಭಾರ ಹೊರೆಸಿ ವಿದ್ಯುತ್ ಅನ್ನು ಸರ್ಕಾರ ಕಳ್ಳ ಮಾರ್ಗದಲ್ಲಿ ಮಾರಿಕೊಳ್ಳುತ್ತಿದೆಯಾ? ಇಲ್ಲ ಎನ್ನುವುದಾದರೆ ದರ ಏರಿಕೆ ಹಿಂಪಡೆಯಲಿ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *