-ವಿದ್ಯುತ್ ಚಾಲಿತ ವಾಹನ ರೈಡ್ ಮಾಡಿದ ಸಚಿವರು
ಬೆಂಗಳೂರು: ವಿದ್ಯುತ್ ಚಾಲಿತ ವಾಹನ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ವಿದ್ಯುತ್ ಚಾಲಿತ ವಾಹನ ದಿನಾಚರಣೆ-2021 ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ನಾರಾಯಣ ಗೌಡ ರ್ಯಾಲಿಗೆ ಹಸಿರು ನಿಶಾನೆ ತೋರಿದರು. ಜೊತೆಗೆ ಸಚಿವರುಗಳು ವಾಹನ ಚಾಲನೆ ಮಾಡಿ ಪರಿಸರ ಸ್ನೇಹಿ ವಾಹನಗಳ ಬಳಕೆ ಹೆಚ್ಚಾಗಲಿ ಎಂದರು.
ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ನಾರಾಯಣ ಗೌಡ, ನಮ್ಮ ಶರೀರವನ್ನು, ನಮ್ಮ ಪರಿಸರವನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ ಎಂದರು. ಇದನ್ನೂ ಓದಿ: ಕಲಬುರಗಿಯಲ್ಲಿ ಮೈತ್ರಿಗೆ ಸಿದ್ದರಾಮಯ್ಯ ವಿರೋಧ- ಮಾಜಿ ಸಿಎಂ ಲೆಕ್ಕಾಚಾರ ಏನು?
ಈ ಮೊದಲು ಸಚಿವರು ಪರಿಸರ ಸ್ನೇಹಿ ವಾಹನ ಬಳಸಿ ಎನ್ನುವ ನಾಮಫಲಕಗಳನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಇಂಧನ ಸಚಿವ ಸುನಿಲ್ ಕುಮಾರ್, ವಿದ್ಯುತ್ ಚಾಲಿತ ವಾಹನಗಳು ಭವಿಷ್ಯಕ್ಕೆ ಅನಿವಾರ್ಯವಾಗಬೇಕು. ಕೇಂದ್ರ ಹಾಗೂ ರಾಜ್ಯ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ಸದ್ಯ 136 ಕಡೆ ವಿದ್ಯುತ್ ರೀಚಾರ್ಜಿಂಗ್ ಸೆಂಟರ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ 500 ಕ್ಕೂ ಹೆಚ್ಚು ಚಾರ್ಜಿಂಗ್ ಸೆಂಟರ್ ಮಾಡುವ ಯೋಜನೆಯಿದೆ ಎಂದರು.
ಸಚಿವ ಮುನಿರತ್ನ ಮಾತನಾಡಿ, ಹೊಸದಾಗಿ ರಿಚಾರ್ಜ್ ಪಾಯಿಂಟ್ ಗಳನ್ನು ಪೆಟ್ರೋಲ್ ಬಂಕ್ ಬಳಿಯೇ ಮಾಡಬೇಕು ಎಂದು ಇಂಧನ ಸಚಿವರಿಗೆ ಮನವಿ ಮಾಡಿದ್ರು. ಈ ಮೂಲಕ 40% ಪೆಟ್ರೋಲ್ ಬಳಕೆ ಕಡಿಮೆ ಮಾಡಬೇಕು. ವಾಹನಗಳ ದರ ಪೆಟ್ರೋಲ್ ಬಳಕೆಯ ವಾಹನಗಳಿಗಿಂತ ಕಡಿಮೆ ಮಾಡಬೇಕು. ವಾಹನ ಕಂಪನಿಗಳಿಗೆ ಬೆಲೆ ಕಡಿಮೆ ಮಾಡಲು ಕೋರುತ್ತೇನೆ ಎಂದರು. ಇದನ್ನೂ ಓದಿ: ಹೆಚ್ಡಿಕೆಗೆ ಕಲಬುರಗಿ ಮೈತ್ರಿ ಪವರ್ – ಮೇಯರ್ ಪಟ್ಟದ ಬೇಡಿಕೆ ಅಸ್ತ್ರ ಏಕೆ?