ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಸೇನೆ, ಮತ್ತು ಸೈನಿಕರ ಚಿತ್ರಗಳನ್ನು ರಾಜಕೀಯ ನಾಯಕರು ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗ ಮಹತ್ವದ ಆದೇಶ ಹೊರಡಿಸಿದೆ.
ದೇಶದ ರಕ್ಷಣಾ ಪಡೆಗಳು, ಆಧುನಿಕ ಪ್ರಜಾಪ್ರಭುತ್ವದಲ್ಲಿ ರಾಜಕೀಯದಲ್ಲಿ ಆಸಕ್ತಿಯಿಲ್ಲದವರು ಮತ್ತು ತಟಸ್ಥ ಪಾಲುದಾರ ಅಂತ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ದೆಹಲಿ ಪ್ರದೇಶಗಳಲ್ಲಿ ಪ್ರಧಾನಿ ಮೋದಿ, ರಾಷ್ಟಾಧ್ಯಕ್ಷ ಅಮಿತ್ ಶಾ ಅವರ ಭಾವಚಿತ್ರದ ಬ್ಯಾನರ್ ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಮತ್ತು ವಾಯುಪಡೆಯ ಚಿತ್ರಗಳನ್ನು ಪ್ರಕಟಿಸಲಾಗಿತ್ತು. ಅಷ್ಟೇ ಅಲ್ಲದೇ ಮೋದಿ ಅವರ ಪ್ರಯತ್ನದ ಫಲವಾಗಿ ಐಎಎಫ್ ಪೈಲಟ್ ಬಿಡುಗಡೆಯಾಗಿದೆ ಎಂದು ಫ್ಲೆಕ್ಸ್ ನಲ್ಲಿ ಮುದ್ರಿಸಿಕೊಂಡು ಪ್ರಚಾರ ಪಡೆದಿದ್ದ ಬಗ್ಗೆ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಅಥವಾ ಜಾಹಿರಾತುಗಳಲ್ಲಿ ಸೇನೆಯ, ಸೈನಿಕರ ಫ್ಲೆಕ್ಸ್, ಬ್ಯಾನರ್ ಗಳಲ್ಲಿ ಭಾವಚಿತ್ರಗಳನ್ನು ಬಳಸದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳಿಗೆ ಸಲಹೆ ನೀಡುವಂತೆ ಚುನಾವಣಾ ಆಯೋಗ ಸೂಚಿಸಿದೆ.
ಇಂದು ಸಂಜೆ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಆಗಲಿದೆ. ಸಂಜೆ ಸುಮಾರು 5.00 ಗಂಟೆಗೆ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ ದೆಹಲಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಲೋಕಸಭೆ ಚುನಾವಣೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ. ಎಷ್ಟು ಹಂತಗಳಲ್ಲಿ ನಡೆಯಲಿದೆ? ಯಾವ ದಿನಾಂಕದಂದು ಎಲ್ಲೆಲ್ಲಿ ಮತದಾನ ನಡೆಯುತ್ತೆ? ಯಾವಾಗ ಫಲಿತಾಂಶ, ಭದ್ರತಾ ಕ್ರಮಗಳೇನು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv