ನವದೆಹಲಿ: ಪಶ್ಚಿಮ ಬಂಗಾಳ (West Bengal) ಹೊರತುಪಡಿಸಿ ಉತ್ತರ ಪ್ರದೇಶ ಸೇರಿದಂತೆ ಆರು ರಾಜ್ಯಗಳಿಗೆ ಎಸ್ಐಆರ್ (SIR) ಗಡುವನ್ನು ಚುನಾವಣಾ ಆಯೋಗವು (Election Commission) ವಿಸ್ತರಿಸಿದೆ.
ಮುಖ್ಯ ಚುನಾವಣಾ ಅಧಿಕಾರಿಗಳ ಮನವಿಯ ಮೇರೆಗೆ ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಢ, ಉತ್ತರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಈ ವಿನಾಯಿತಿ ನೀಡಲಾಗಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ವಿಶೇಷ ತೀವ್ರ ಪರಿಷ್ಕರಣೆ ಮೂಲಕ ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ಚುನಾವಣಾ ಆಯೋಗವು ನಿರ್ದೇಶಿಸಿದೆ. ಪ್ರತಿ ಬೂತ್ನಲ್ಲಿ ಕಂಡುಬರುವ ಮೃತ, ವರ್ಗಾವಣೆಗೊಂಡ, ಗೈರುಹಾಜರಾದ ಮತ್ತು ನಕಲಿ ಮತದಾರರ ಪಟ್ಟಿಯನ್ನು ಕರಡು ಪಟ್ಟಿ ಬಿಡುಗಡೆ ಮಾಡುವ ಮೊದಲು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಬೂತ್-ಮಟ್ಟದ ಏಜೆಂಟ್ಗಳೊಂದಿಗೆ ಹಂಚಿಕೊಳ್ಳಬೇಕೆಂದು ಆಯೋಗವು ನಿರ್ದೇಶಿಸಿದೆ. ಇದನ್ನೂ ಓದಿ: ಪುಟಿನ್ ಭಾರತ ಭೇಟಿ ಬಳಿಕ ಟ್ರಂಪ್ಗೆ ಮೋದಿ ಫಸ್ಟ್ ಕಾಲ್ – ಇಂಧನ, ವ್ಯಾಪಾರ ಕುರಿತು ದೀರ್ಘ ಚರ್ಚೆ
ಈ ಮೊದಲು ನಿಗದಿಪಡಿಸಿದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಈ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಎಣಿಕೆ ಮತ್ತು ಪರಿಶೀಲನಾ ಕಾರ್ಯಕ್ಕೆ ಡಿಸೆಂಬರ್ 11ರವರೆಗೆ ಸಮಯವಿತ್ತು. ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 16ರಂದು ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೆ, ಕ್ಷೇತ್ರ ಮಟ್ಟದಲ್ಲಿನ ವಾಸ್ತವಿಕ ಸವಾಲುಗಳು ಮತ್ತು ಸಿಇಒಗಳ ಕೋರಿಕೆಯ ಮೇರೆಗೆ ಆಯೋಗವು ಈ ಗಡುವನ್ನು ಮುಂದೂಡಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ನಿಷೇಧಿತ ಇ-ಸಿಗರೇಟ್ ಸೇವನೆ – ಟಿಎಂಸಿ ಸಂಸದರ ವಿರುದ್ಧ ಅನುರಾಗ್ ಠಾಕೂರ್ ಆರೋಪ
ಬಿಹಾರದಲ್ಲಿ ಅಪ್ಲೋಡ್ ಮಾಡಿದ ರೀತಿಯಲ್ಲಿಯೇ ಎಲ್ಲಾ ರಾಜ್ಯಗಳು ಅಂತಹ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ವೆಬ್ಸೈಟ್ಗಳಲ್ಲಿ ಲಭ್ಯವಾಗುವಂತೆ ಚುನಾವಣಾ ಆಯೋಗ ನಿರ್ದೇಶಿಸಿದೆ. ಇದು ಮತದಾರರ ಪಟ್ಟಿಯನ್ನು ಸುಧಾರಿಸಲು ಮತ್ತು ಮತದಾನ ಪ್ರಕ್ರಿಯೆಗೆ ಪಾರದರ್ಶಕತೆಯನ್ನು ತರಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ – ಸಿಎಂ ಸೇರಿ ಗಣ್ಯರ ಸಂತಾಪ

