ಭುವನೇಶ್ವರ: ವೃದ್ಧ ಎಂಬುವುದನ್ನು ಲೆಕ್ಕಿಸದೇ ಹಾಡಹಗಲೇ ವಿದ್ಯುತ್ ಕಂಬಕ್ಕೆ ಕಟ್ಟಿ ಕುಟುಂಬಸ್ಥರು ಮರದ ದೊಣ್ಣೆನಿಂದ ಅಮಾನವೀಯವಾಗಿ ಥಳಿಸಿ ಕೊಂದಿರುವ ಘಟನೆ ಒಡಿಶಾದ ಕೋರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕುರ್ಷಾ ಮಣಿಯಕ್ಕ ಎಂದು ಗುರುತಿಸಲಾಗಿದೆ. ವೈಯಕ್ತಿಕ ಜಗಳದಿಂದ ಮಗನ ಮನೆಯ ಮೇಲಿನ ಅಂಚನ್ನು ಹೊಡೆದು ಹಾಕಿದ್ದರಿಂದ ಕುಟುಂಬಸ್ಥರು ವೃದ್ಧನೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ಮನವಿ ಮಾಡಿದ್ರೂ ನನಗೆ ಸರ್ಕಾರದಿಂದ ಸಹಾಯವೇ ಸಿಗಲಿಲ್ಲ; ಗೆದ್ದಾಗ ಪ್ರಶಂಸಿಸುತ್ತಿದ್ದಾರೆ – ಕಾಮನ್ವೆಲ್ತ್ನಲ್ಲಿ ಕಂಚು ಗೆದ್ದ ಕ್ರೀಡಾಪಟು ಬೇಸರ
ಕೊನೆಗೆ ಕುರ್ಷಾ ಮಣಿಯಕ್ಕನ ಸಹೋದರ, ಮಗ ಮತ್ತು ಸೊಸೆ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ, ಮರದ ದೊಣ್ಣೆಯಿಂದ ನಿರ್ದಾಕ್ಷಿಣ್ಯವಾಗಿ ಥಳಿಸಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ವೃದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗದೇ ತನ್ನ ಎರಡೂ ಪಾದಗಳನ್ನು ನೆಲದಿಂದ ಮೇಲಕ್ಕೆತ್ತಿರುವುದನ್ನು ಕಾಣಬಹುದು. ಕುಟುಂಬಸ್ಥರು ಆತನ ಕಾಲುಗಳ ಮೇಲೆ ಹಿಗ್ಗಾಮುಗ್ಗ ಥಳಿಸುವಾಗ ವೃದ್ಧ ನೋವಿನಿಂದ ಜೋರಾಗಿ ಅಳುತ್ತಾನೆ. ಕೊನೆಗೆ ನೋವು ತಡೆಯಲಾಗದೇ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿರುವುದನ್ನು ಕಾಣಬಹುದಾಗಿದೆ.
ಘಟನೆ ನಂತರ ಸ್ಥಳೀಯರ ನೆರವಿನಿಂದ ಆರೋಪಿಗಳು ಕುರ್ಷಾ ಮಣಿಯಕ್ಕನ ಶವವನ್ನು ಸುಟ್ಟು ಹಾಕಿದ್ದಾರೆ. ಈ ಘಟನೆ ಕುರಿತಂತೆ ಕೆಲ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ, ಓರ್ವನನ್ನು ಬಂಧಿಸಿದ್ದಾರೆ. ಮತ್ತೊಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 500ಮೀ. ದೂರದವರೆಗೆ ಕಾರನ್ನು ಎಳೆದೊಯ್ದ ಟ್ರಕ್- ಸಮಾಜವಾದಿ ಮುಖಂಡನಿದ್ದ ಕಾರು ಜಖಂ