ಚೆನ್ನೈ: 10 ತಿಂಗಳ ಬಳಿಕ ಅಮೆರಿಕಾದಿಂದ ವಾಪಸ್ಸಾದ ದಂಪತಿಯನ್ನು ಕಾರು ಡ್ರೈವರ್ ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆಯೊಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಮೃತ ದುರ್ದೈವಿ ದಂಪತಿಯನ್ನು ಶ್ರೀಕಾಂತ್(60) ಹಾಗೂ ಅನುರಾಧಾ(53) ಎಂದು ಗುರುತಿಸಲಾಗಿದೆ. ಇವರನ್ನು ಮನೆಯ ಕಾರು ಡ್ರೈವರ್ ಕೃಷ್ಣ ಕೊಲೆ ಮಾಡಿದ್ದಾನೆ. ಈ ದಂಪತಿಯ ಮಗಳು ಅಮೆರಿಕಾದಲ್ಲಿದ್ದು, ಈ ಹಿನ್ನೆಲೆಯಲ್ಲಿ 10 ತಿಂಗಳ ಹಿಂದೆ ಅಲ್ಲಿಗೆ ತೆರಳಿದ್ದು, ಶನಿವಾರ ಬೆಳಗ್ಗೆ ವಾಪಸ್ಸಾಗಿದ್ದಾರೆ.
ಕೃಷ್ಣ ಕಳೆದ 10 ವರ್ಷಗಳಿಂದ ದಂಪತಿ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಅಂತೆಯೇ ಅಮೆರಿಕಾದಿಂದ ಬರುತ್ತಿರುವ ದಂಪತಿಯನ್ನು ಕರೆ ತರಲೆಂದು ಹೋದವನು ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್
ಅಮೆರಿಕಾದಿಂದ ಬರುತ್ತಿರುವ ದಂಪತಿಯನ್ನು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಕೃಷ್ಣ ಕರೆದುಕೊಂಡು ಬಂದಿದ್ದ. ದಂಪತಿ ಮನೆಗೆ ಬಂದ ಕೆಲ ಗಂಟೆಗಳ ಬಳಿಕ ಮಗಳು ಕರೆ ಮಾಡಿದ್ದಾರೆ. ಎಷ್ಟು ಬಾರಿ ಕರೆ ಮಾಡಿದರೂ ಅಪ್ಪ-ಅಮ್ಮನ ಮೊಬೈಲ್ ಸ್ವಿಚ್ಛ್ ಆಫ್ ಆಗಿದೆ ಅಂತಾನೇ ಮೆಸೇಜ್ ಬರುತ್ತಿತ್ತು. ಇದರಿಂದ ಗಾಬರಿಗೊಂಡ ಆಕೆ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ.
ಇತ್ತ ಮಾಹಿತಿ ತಿಳಿದ ಕೂಡಲೇ ಸಂಬಂಧಿಕರು ಶ್ರೀಕಾಂತ್ ಮನೆಗೆ ದೌಡಾಯಿಸಿದ್ದಾರೆ. ಆದರೆ ಮನೆಯಲ್ಲಿ ಇಬ್ಬರೂ ಇರಲಿಲ್ಲ. ಇದರಿಂದ ಮತ್ತಷ್ಟು ಗಾಬರಿಗೊಂಡ ಸಂಬಂಧಿಕರು ಹುಡುಕಾಟ ಆರಂಭಿಸಿದ್ದಾರೆ. ಅಲ್ಲದೆ ಪೊಲೀಸರಿಗೂ ದೂರು ನೀಡಿದ್ದಾರೆ. ಪೊಲೀಸರು ಕೂಡ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಕಾರಿನ ಚಾಲಕನ ಕೂಡ ನಾಪತ್ತೆಯಾಗಿರುವುದು ಹಾಗೂ ಆತನ ಮೊಬೈಲ್ ಕೂಡ ಸ್ವಿಚ್ಛ್ ಆಫ್ ಆಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮನೆಯಲ್ಲಿನ ಬೀರು ಒಡೆಯಲಾಗಿತ್ತು. ಇದರಿಂದ ಚಾಲಕನ ಮೇಲೆಯೇ ಪೊಲೀಸರಿಗೆ ಸಂಶಯ ಉಂಟಾಯಿತು. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ
ಕೆಲ ಹೊತ್ತು ಹುಡುಕಾಟ ನಡೆಸಿದ ಬಳಿಕ ದಂಪತಿ ಶವವಾಗಿ ಪತ್ತೆಯಾದರು. ಕೃಷ್ಣನೇ ಅವರನ್ನು ಕೊಲೆ ಮಾಡಿದ್ದಾನೆ ಎಮದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ತನಿಖೆ ನಡೆಸಿದಾಗ ಚಾಲಕ ಕೃಷ್ಣ ದಂಪತಿಯನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರುವಾಗ ಅಪಹರಿಸಿ ಅವರ ಮನೆಯ ಬದಲಾಗಿ ನೆಮಿಲಿಚೇರಿಯಲ್ಲಿರುವ ಅವರ ಫಾರ್ಮ್ ಹೌಸ್ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಕೇಷ್ಣ ಮತ್ತು ಆತನ ಸಹಚರ ರವಿ ಸೇರಿ ದಂಪತಿಯನ್ನು ಹರಿತವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಇಬ್ಬರೂ ಸೇರಿ ಮನೆಯಲ್ಲಿ ಬಿದ್ದಿರುವ ರಕ್ತದ ಕಲೆಗಳನ್ನು ಒರೆಸಿ ಶವಗಳನ್ನು ಅಲ್ಲೇ ಸಮೀಪದಲ್ಲಿರುವ ಹೊಂಡದಲ್ಲಿ ಹೂತು ಹಾಕಿದ್ದಾರೆ. ನಂತರ ಕಾರಿನಲ್ಲಿದ್ದ ವಸ್ತುಗಳನ್ನು ದೋಚಿ ನೇಪಾಳಕ್ಕೆ ಹಾರಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನೆರೆಮನೆ ಯುವಕನ ಕಿರುಕುಳಕ್ಕೆ ಮನನೊಂದು ಯುವತಿ ಆತ್ಮಹತ್ಯೆ
ಸದ್ಯ ಪೊಲೀಸರು ಆರೋಪಿ ಕೃಷ್ಣನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ದಂಪತಿಯಿಂದ 5 ಲಕ್ಷ ಹಾಗೂ 5 ಪವನ್ ಚಿನ್ನಾಭರಣವನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ದಂಪತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೃಷ್ಣನನ್ನು ವಿಚಾರಣೆ ಒಳಪಡಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.