ಚಿಕ್ಕಬಳ್ಳಾಪುರ: ವೃದ್ಧ ದಂಪತಿಯನ್ನು ಭೀಕರವಾಗಿ ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಕಾಮಾಟಿಗರ ಪೇಟೆಯಲ್ಲಿ ನಡೆದಿದೆ.
ಕಾಮಟಿಗರಪೇಟೆ ಬಡಾವಣೆಯ ಶ್ರೀನಿವಾಸಲು(77) ಹಾಗೂ ಪದ್ಮಾವತಿ(70) ಕೊಲೆಯಾದ ದಂಪತಿ. ಶ್ರೀನಿವಾಸಲು ರನ್ನು ಎಳೆದು ತಂದು ಬಾತ್ರೂಮ್ನಲ್ಲಿ ಹತ್ಯೆ ಮಾಡಲಾಗಿದೆ. ಪತ್ನಿ ಪದ್ಮಾವತಿಯನ್ನು ಮನೆಯ ಹಾಲ್ನಲ್ಲಿ ಬಲವಾದ ಆಯುಧದಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ.
ಎಂದಿನಂತೆ ಇಂದು ಬೆಳಿಗ್ಗೆ ಮನೆಯ ಕೆಲಸದಾಳು ಮನೆ ಬಳಿ ಬಂದು ಬಾಗಿಲು ಬಡಿದರೆ ವೃದ್ಧ ದಂಪತಿ ಬಾಗಿಲು ತೆಗೆದಿಲ್ಲ. ಇದರಿಂದ ಕೆಲಸದಾಳು ಮನೆಯ ಹಿಂಬದಿಯಿಂದ ಬಂದು ಇನ್ನೊಂದು ಡೋರ್ ನೋಡಿದರೆ ಅದು ತೆರೆದಿತ್ತು, ಅನುಮಾನದಿಂದ ಒಳಗೆ ಹೋಗಿ ನೋಡಿದಾಗ ಕೆಲಸದಾಳಿಗೆ ಒಳಗೆ ಇಬ್ಬರು ಕೊಲೆಯಾಗಿರುವ ಭಯಾನಕ ದೃಶ್ಯ ಕಂಡುಬಂದಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಪರಿಶೀಲನೆ ನಡೆಸಿದರು. ಮನೆಯ ಮೇಲಿನ ಗವಾಕ್ಷಿ ಕಿಟಕಿಯ ಮೂಲಕ ಮನೆಯ ಒಳಗೆ ಇಳಿದಿರುವ ದುಷ್ಕರ್ಮಿಗಳು, ಮನೆಯಲ್ಲಿದ್ದ ವೃದ್ಧ ದಂಪತಿಯನ್ನು ಹತ್ಯೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ
ಘಟನೆ ಕುರಿತು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ 4 ತಂಡಗಳನ್ನು ನೇಮಕ ಮಾಡಲಾಗಿದೆ. ಬಡಾವಣೆಯಲ್ಲಿ ಯಾರ ತಂಟೆಗೂ ಹೋದವರಲ್ಲ. ಆದರೂ ಮನೆಯ ಒಳಗೆ ನುಗ್ಗಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಕೊಲೆ ಪ್ರಕರಣ ಭೇದಿಸಲು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ದೃಷ್ಟಿಕೋನದಿಂದ ತನಿಖೆ ನಡೆಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಾಹುಬಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಶ್ರವಣಬೆಳಗೊಳದಲ್ಲಿ ಮೌನ ಪ್ರತಿಭಟನೆ