ಮಡಿಕೇರಿ: ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆ ಹಾಗೂ ಭೂ ಕುಸಿತಕ್ಕೆ ಕೊಡಗಿನ ಜನ ಬೆದರಿ ಪ್ರಾಣ ಉಳಿಸಿಕೊಳ್ಳೋಕೆ ಪರದಾಡಿದರು. ತಾವು ಸಂಪಾದಿಸಿದ್ದು ಏನೂ ಬೇಡ ಸದ್ಯ ಪ್ರಾಣ ಉಳಿದರೆ ಸಾಕು ಅಂತ ಎಲ್ಲವನ್ನೂ ಬಿಟ್ಟು ಊರನ್ನೇ ತೊರೆದು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದರು.
ಆದರೆ ಮಡಿಕೇರಿ ಸಮೀಪದ ಕೊಯನಾಡಿನ ಈ ವೃದ್ಧ ಸಹೋದರಿಯರು ಮಾತ್ರ ಪ್ರಾಣಕ್ಕೆ ಸಂಕಟ ಬಂದರೂ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಲಿಲ್ಲ. ಅದಕ್ಕೆ ಕಾರಣ ಇವರು ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು. ಆಗಸ್ಟ್ 15ರ ನಂತರ ಸುರಿದ ಭಾರೀ ಮಳೆಗೆ ಪಯಸ್ವಿನಿ ನದಿ ಉಕ್ಕಿ ಆಯಿಶಾ ಹಾಗೂ ಸೈನಬಾ ಇರುವ ಮನೆಯ ಮೆಟ್ಟಿಲಿನವರೆಗೆ ನೀರು ಹರಿದು ಆತಂಕ ಸೃಷ್ಟಿಸಿತ್ತು.
ನದಿಯ ಅಬ್ಬರ ಸ್ವಲ್ಪ ಹೆಚ್ಚಾದರೂ ಇಡೀ ಮನೆಯೇ ಕೊಚ್ಚಿ ಹೋಗುವ ಭೀತಿ ಕಾಡಿತ್ತು. 80 ವರ್ಷ ಆಸುಪಾಸಿನ ಆಯಿಶಾ ತಂಗಿ ಸೈನಬಾ ಹುಟ್ಟುತ್ತಲೇ ಅಂಗವಿಕಲರು, ತಮ್ಮನ್ನೇ ನಂಬಿರುವ ಜಾನುವಾರುಗಳು ಜೊತೆಗಿದೆ. ಹೇಗೆ ಮನೆ ಬಿಟ್ಟು ಅವರನ್ನೆಲ್ಲಾ ಕರೆದುಕೊಂಡು ಬರೋದು ಎಂದು ನಿರಾಶ್ರಿತ ಕೇಂದ್ರಕ್ಕೆ ಬನ್ನಿ ಅಂತ ಕರೆದರೂ ಈ ಇಬ್ಬರು ಮಾತ್ರ ಮನೆ ಬಿಟ್ಟು ಕದಲಲಿಲ್ಲ.
ನಾವು ಸಾಕಿದ ಜಾನುವಾರುಗಳನ್ನು ಬಿಟ್ಟು ಬರುವುದಿಲ್ಲ, ಜಾನುವಾರುಗಳ ಜೊತೆಗೆ ಇರುತ್ತೀವಿ. ಸತ್ತರೆ ಇಲ್ಲೇ ಸಾಯುತ್ತೇವೆ ಎಂದು ಹಠ ಹಿಡಿದು ಮನೆಯ ಸುತ್ತಲೂ ಆವರಿಸಿದ್ದ ನೀರು ಹಾಗೂ ಭೋರ್ಗರೆಯುತ್ತಿದ್ದ ಪಯಸ್ವಿನಿ ನದಿಯ ತಟದಲ್ಲೇ ಇದ್ದರು. ಇದೀಗ ಮಳೆಯ ಅಬ್ಬರ ಕಡಿಮೆಯಾಗಿ ಸಹೋದರಿಯರು ಸಾವನ್ನೇ ಗೆದ್ದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv