ಮುಂಬೈ: ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಸರ್ಕಾರ ಮುಂದಿನ 6 ತಿಂಗಳುಗಳಲ್ಲಿ ಪತನವಾಗುವ ಸಾಧ್ಯತೆ ಇದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಭವಿಷ್ಯ ನುಡಿದಿದ್ದಾರೆ.
ಎನ್ಸಿಪಿ ಶಾಸಕರು ಹಾಗೂ ಪಕ್ಷದ ಇತರ ನಾಯಕರ ಸಭೆಯಲ್ಲಿ ಮಾತನಾಡಿದ ಪವಾರ್, ಮಹಾರಾಷ್ಟ್ರದಲ್ಲಿ ಹೊಸದಾಗಿ ರಚನೆಯಾಗಿರುವ ಸರ್ಕಾರ ಮುಂದಿನ 6 ತಿಂಗಳುಗಳಲ್ಲಿ ಬೀಳುವ ಸಾಧ್ಯತೆ ಇದೆ. ಶಿಂಧೆಯನ್ನು ಬೆಂಬಲಿಸುತ್ತಿರುವ ಅನೇಕ ಬಂಡಾಯ ಶಾಸಕರಿಗೆ ಪ್ರಸ್ತುತ ವ್ಯವಸ್ಥೆಯಿಂದ ಅಸಮಾಧಾನವಿದೆ. ಒಮ್ಮೆ ಸಚಿವರ ಖಾತೆ ಹಂಚಿಕೆಯಾದ ಬಳಿಕ ಅವರ ಅಸಮಾಧಾನ ಹೊರ ಬರಲಿದ್ದು, ಇದು ಅಂತಿಮವಾಗಿ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಹೈಡ್ರಾಮಾ ಅಂತ್ಯ – ವಿಶ್ವಾಸ ಪರೀಕ್ಷೆ ಗೆದ್ದ ಏಕನಾಥ್ ಶಿಂಧೆ
ಎನ್ಸಿಪಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಇನ್ನು ನಮ್ಮ ಕೈಯಲ್ಲಿ ಕೇವಲ 6 ತಿಂಗಳು ಉಳಿದಿದೆ. ಶಿಂಧೆ ಸರ್ಕಾರ ಉರುಳುವ ಸಾಧ್ಯತೆಯಿಂದ ಎಲ್ಲರೂ ಮಧ್ಯಂತರ ಚುನಾವಣೆಗೆ ಸಿದ್ಧರಾಗಬೇಕು. ಎನ್ಸಿಪಿ ಶಾಸಕರು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂದು ಸೂಚನೆ ನೀಡಿದರು. ಇದನ್ನೂ ಓದಿ: ಮೆಟ್ಟಿಲಿನಿಂದ ಎಡವಿ ಬಿದ್ದ ಲಾಲೂ ಪ್ರಸಾದ್ ಯಾದವ್ – ಭುಜದ ಮೂಳೆ ಮುರಿತ
ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸರ್ಕಾರದ ಪತನದ ಬಳಿಕ ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇಂದು ನಡೆದ ವಿಶ್ವಾಸ ಮತಯಾಚನೆ ಪರೀಕ್ಷೆಯಲ್ಲಿ ಶಿಂಧೆ ತೇರ್ಗಡೆಯಾಗಿದ್ದಾರೆ. ಸರ್ಕಾರದ ಪರವಾಗಿ 164 ಮತಗಳು ಬಿದ್ದರೆ ವಿರುದ್ಧವಾಗಿ 99 ಮತಗಳು ಬಿದ್ದಿದೆ.