ಬೆಂಗಳೂರು: ಸರ್ಕಾರ ಬಂದ್ಗೆ ಬೆಂಬಲ ಕೊಟ್ಟಿಲ್ಲ, ಯಾಕೆ ಕೊಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದರು.
ಈದ್ಗಾ ಮೈದಾನ ವಿವಾದ ಜಟಾಪಟಿ ಈಗ ಬಂದ್ವರೆಗೆ ತಲುಪಿದೆ. ಈ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ವತಿಯಿಂದ ಪೊಲೀಸರು ಎಲ್ಲ ಬಂದೋಬಸ್ತ್ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಆದ್ರೆ ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಅಲ್ಲಿರೋರಲ್ಲಿಯೂ ವಿನಂತಿ ಮಾಡ್ತೀನಿ ಎಂದು ಕೇಳಿಕೊಂಡರು.
ಸ್ಥಳಕ್ಕೆ ಭೇಟಿ ನೀಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ. ಪೊಲೀಸರು ಇದ್ದಾರೆ, ಎಲ್ಲ ರೀತಿಯ ಬಂದೋಬಸ್ತ್ ಮಾಡಿದ್ದಾರೆ. ಸರ್ಕಾರ ಬಂದ್ಗೆ ಬೆಂಬಲ ಕೊಟ್ಟಿಲ್ಲ, ಯಾಕೆ ಬೆಂಬಲ ಕೊಡಬೇಕು. ಜಾಗದ ಬಗ್ಗೆ ಬಿಬಿಎಂಪಿ ನಿರ್ಣಯ ಮಾಡುತ್ತೆ ಎಂದರು. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ- ಅನುಮತಿ ಇಲ್ಲದ ಬಂದ್ಗಾಗಿ 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಏನಿದು ಘಟನೆ?
ಇಂದು ಚಾಮರಾಜಪೇಟೆ ನಾಗರಿಕ ಒಕ್ಕೂಟ, ಶ್ರೀರಾಮಸೇನೆ, ಹಿಂದೂ ಜನಜಾಗೃತಿ ಸೇರಿದಂತೆ ಅನೇಕ ಹಿಂದೂ ಸಂಘಟನೆ ಬಂದ್ಗೆ ಕರೆ ಕೊಟ್ಟಿದ್ದು, ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚಾಮರಾಜಪೇಟೆ ಬಂದ್ ಆಗಲಿದೆ. ಈದ್ಗಾ ಆಟದ ಮೈದಾನವನ್ನು ವಕ್ಫ್ಗೆ ನೀಡಬಾರದು ಅದು ಬಿಬಿಎಂಪಿ ಸುಪರ್ದಿಯಲ್ಲಿಯೇ ಇದ್ದು ಆಟದ ಮೈದಾನವಾಗಿರಬೇಕು. ಈದ್ಗಾ ಹೆಸರನ್ನು ಬದಲಾಗಿ ಒಡೆಯರ್ ಹೆಸರನ್ನು ಇಡಬೇಕು. ಇದು ಒಡೆಯರ್ ಕೊಡುಗೆ ಅನ್ನೋದು ಸಂಘಟನೆಯವರ ಆಗ್ರಹ ಮಾಡಿದ್ದಾರೆ.