ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ವಿಚಾರಣೆ ಹಾಜರಾಗುವಂತೆ ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ನಮನ್ಸ್ ನೀಡಿದೆ. ದೆಹಲಿ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಮೊದಲ ಬಾರಿ ಸಮನ್ಸ್ ನೀಡಿದ್ದು ಮತ್ತೆ ಡಿ.ಕೆ ಶಿವಕುಮಾರ್ ಇಡಿ ಸುಳಿಯಲ್ಲಿ ಸಿಲುಕಿದಂತಾಗಿದೆ.
ಜನವರಿ 13 ರಂದು ವಿಚಾರಣೆಗೆ ಹಾಜರಾಗುಂತೆ ಸಮನ್ಸ್ ನೀಡಿದ್ದು, 2013-2014 ರಲ್ಲಿ ನಡೆಸಿರುವ ಆರ್ಥಿಕ ವ್ಯವಹಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಡಿ ಅಧಿಕಾರಿಗಳು ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.
ಜಾಮೀನು ಪಡೆದ ಬಳಿಕ ಸಮನ್ಸ್ ಜಾರಿಯಾದ ಹಿನ್ನೆಲೆ ನಿನ್ನೆ ದೆಹಲಿಯಲ್ಲಿ ವಕೀಲ ಅಭಿಷೇಕ ಮನುಸಿಂಘ್ವಿ ಅವರನ್ನ ಡಿ.ಕೆ ಶಿವಕುಮಾರ್ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇಡಿ ವಿಚಾರಣೆಗೆ ಹಾಜರಾಗುವ ಬಗ್ಗೆ ಹಾಗೂ ಮುಂದಿನ ಕಾನೂನು ಹೋರಾಟ ಸಮಾಲೋಚನೆ ಮಾಡಿದ್ದಾರೆ ಎನ್ನಲಾಗಿದೆ.
ವಿಚಾರಣೆ ಮುಂದೂಡಿಕೆ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ದಾಖಲಿಸಿದ್ದ 120 ಬಿ ರದ್ದು ಮಾಡುವಂತೆ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಎರಡು ವಾರಕ್ಕೆ ಮುಂದೂಡಿಕೆಯಾಗಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದ್ಯ ಪೀಠ, ಬದಲಿ ಪೀಠದಲ್ಲಿ ಇದೇ ಪ್ರಕರಣ ಮತ್ತೊಂದು ಕೇಸ್ ವಿಚಾರಣೆ ಹಂತದಲ್ಲಿರುವ ಕಾರಣ ಎರಡು ವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು. ಅಲ್ಲದೇ ಎರಡು ಕೇಸ್ಗಳನ್ನು ಒಟ್ಟು ಮಾಡಿ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.