ತುಮಕೂರು: ಬುಧವಾರ ಬೆಳ್ಳಂಬೆಳಗ್ಗೆ ಸಚಿವ ಜಿ.ಪರಮೇಶ್ವರ್ (G Parameshwar) ಶಿಕ್ಷಣ ಸಂಸ್ಥೆ ಮೇಲೆ ಇಡಿ (ED)ದಾಳಿ ನಡೆಸಿದೆ. ಈ ನಡುವೆ ಪರಮೇಶ್ವರ್ ಕ್ರಯ ಮಾಡಿದ್ದ ಎಚ್.ಎಮ್.ಎಸ್ ಕಾಲೇಜಿನ ಕ್ರಯಪತ್ರವನ್ನು ವಶಕ್ಕೆ ಪಡಿಸಿಕೊಂಡಿರುವ ಇಡಿ ಅಧಿಕಾರಿಗಳು, ಶೋಧಕಾರ್ಯವನ್ನು ಮುಂದುವರಿಸಿದ್ದಾರೆ.
ಪರಮೇಶ್ವರ್ ಒಡೆತನದ ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಮತ್ತು ನೆಲಮಂಗಲದ ಟಿ. ಬೇಗೂರು ಬಳಿ ಇರುವ ಮೆಡಿಕಲ್ ಕಾಲೇಜುಗಳ ಮೇಲೆ ಇಡಿ ದಾಳಿ ನಡೆಸಿದೆ. ಈ ವೇಳೆ ಕಾಲೇಜಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದೆ. ಇದನ್ನೂ ಓದಿ: ಮೇ 22ಕ್ಕೆ ಬಿಕನೇರ್ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ
ತುಮಕೂರಿನಲ್ಲಿರುವ ತಾಂತ್ರಿಕ ಕಾಲೇಜಿನಲ್ಲಿ ಶೋಧ ನಡೆಸಿದ ಅಧಿಕಾರಿಗಳಿಗೆ ಆಸ್ತಿಯ ಕ್ರಯಪತ್ರವೊಂದು ಸಿಕ್ಕಿದೆ ಎನ್ನಲಾಗಿದೆ. ಜಿ ಪರಮೇಶ್ವರ್ ಮಾಜಿ ಶಾಸಕ ಶಫಿ ಅಹ್ಮದ್ರಿಂದ ಎಚ್.ಎಮ್.ಎಸ್ ಕಾಲೇಜು ಖರೀದಿಸಿದ್ದರು. ಸುಮಾರು 95 ಕೋಟಿ ರೂ. ಗೆ ಖರೀದಿ ಮಾಡಿದ್ದಾರೆ ಎಂದು ಕ್ರಯಪತ್ರದಲ್ಲಿ ನಮೂದಿಸಿದ್ದರೂ ಅಸಲಿಗೆ 140 ಕೋಟಿ ರೂ.ಗೆ ವ್ಯವಹಾರ ನಡೆದಿದೆ ಎನ್ನಲಾಗಿದೆ. ಪರಮೇಶ್ವರ್ ಸಂದಾಯ ಮಾಡಿದ್ದ ಹಣವನ್ನು ದುಬೈನಲ್ಲಿ ಇದ್ದ ಶಫಿ ಅಹ್ಮದ್ ಅವರ ಸಂಬಂಧಿ ಚಿನ್ನದ ವ್ಯಾಪಾರಿಗೆ ತಲುಪಿದೆ ಎನ್ನಲಾಗಿದೆ. ಇದು ರನ್ಯಾ ರಾವ್ಗೂ (Ranya Rao) ನಂಟಿದೆಯಾ ಎಂಬ ಆಯಾಮದಲ್ಲಿ ಇಡಿ ಅಧಿಕಾರಿಗಳು ತನಿಖೆ ಶುರುಮಾಡಿದ್ದಾರೆ. ಇದನ್ನೂ ಓದಿ: ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿ – ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ
ಕೇವಲ ಎಚ್.ಎಮ್.ಎಸ್ ಕಾಲೇಜು ಒಂದೇ ಅಲ್ಲ, ನಗರದ ಪ್ರತಿಷ್ಠಿತ ಬಂಡಿಮನೆ ಕಲ್ಯಾಣಮಂಟಪವನ್ನೂ ಪರಮೇಶ್ವರ್ ಖರೀಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಎಸ್ ಮಾಲನ್ನೂ ಖರೀದಿ ಮಾಡುವ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಇದರ ಜೊತೆ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆ ಕೂಡ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದೆ ಎಂಬ ಆರೋಪದ ಆಯಾಮದಲ್ಲೂ ಶೋಧ ನಡೆದಿದೆ. ಇದನ್ನೂ ಓದಿ: ಆಂಧ್ರಕ್ಕೆ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ಕರ್ನಾಟಕ
ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಜೊತೆ ನೆಲಮಂಗಲ ತಾಲೂಕಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 14 ಗಂಟೆಗಳ ಕಾಲ 7 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ರಾತ್ರಿ ಕೂಡ ಎರಡೂ ಕಡೆಗಳಲ್ಲಿ ಶೋಧ ನಡೆದಿದೆ. ಇಂದು ಮುಂಜಾನೆ 6 ಗಂಟೆಯಿಂದಲೇ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.. ಇದನ್ನೂ ಓದಿ: ರಾಜ್ಯದ ಪ್ರಭಾರ ಡಿಜಿ & ಐಜಿಪಿಯಾಗಿ ಎಂ.ಎ.ಸಲೀಂ ನೇಮಕ