– ವಿಚಾರಣೆಗೆ ಹಾಜರಾಗುವಂತೆ ಆರ್ಟಿಐ ಕಾರ್ಯಕರ್ತ ಗಂಗರಾಜ್ಗೆ ಇ.ಡಿ ನೋಟಿಸ್
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪತ್ನಿಗೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾದಂತೆ ಕಾಣುತ್ತಿದೆ.
ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿ 2023ರ ನವೆಂಬರ್ನಲ್ಲಿ 1.84 ಕೋಟಿ ರೂ. ಹಣ ನೀಡಿ ಖರೀದಿಸಿರುವ 20 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಹಣದ ಮೂಲ ಪತ್ತೆ ಹಚ್ಚಿ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜ್ ಇಡಿಗೆ ಮನವಿ ಮಾಡಲಿದ್ದಾರೆ. ನಂತರ ದೂರು ಕೂಡ ನೀಡಲಿದ್ದಾರೆ.
ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಗಂಗರಾಜ್, ಇಷ್ಟು ಹಣ ಒಬ್ಬ ಗೃಹಿಣಿಗೆ ಎಲ್ಲಿಂದ ಬಂತು ಎಂಬ ಪ್ರಶ್ನೆ ಬರುತ್ತದೆ. ಹೀಗಾಗಿ, ಈ ಪ್ರಕರಣದ ಕುರಿತು ನಾನು ಇ.ಡಿ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತೀನಿ ಎಂದು ತಿಳಿಸಿದರು.
ಅಧಿಕಾರಿಗಳು ನನ್ನ ಜೊತೆ ಚರ್ಚೆಗೆ ಒಪ್ಪಿದರೆ ಮತ್ತು ಈಗ ತನಿಖೆ ನಡೆಸುತ್ತಿರುವ ಪ್ರಕರಣದ ಜೊತೆಗೆ ಇದನ್ನೂ ತೆಗೆದುಕೊಳ್ಳುತ್ತೇವೆ ಎನ್ನುವುದಾದರೆ ನಾನು ಸಂಪೂರ್ಣ ದಾಖಲಾತಿಯನ್ನು ಅವರಿಗೆ ನೀಡುತ್ತೇನೆ. ಒಂದು ವೇಳೆ ಇದು ನಮಗೆ ಸಂಬಂಧಪಟ್ಟಿದ್ದಲ್ಲ. ಬೇಕಾದರೆ ನೀವು ಪ್ರತ್ಯೇಕವಾಗಿ ದೂರು ನೀಡಿ ಎಂದರೆ ಇ.ಡಿಗೆ ದೂರು ಕೊಡ್ತೀನಿ ಎಂದು ಹೇಳಿದರು.
ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಶುರು ಮಾಡಿದೆ. ಇದರ ಭಾಗವಾಗಿ ಮೈಸೂರಿನ ಆರ್ಟಿಐ ಕಾರ್ಯಕರ್ತ ಗಂಗರಾಜ್ ಅವರನ್ನು ಸೋಮವಾರ ವಿಚಾರಣೆಗೆ ಕರೆದಿದೆ. ವಿಚಾರಣೆ ವೇಳೆ ಗಂಗರಾಜ್ ಒಟ್ಟು 1,400 ಸೈಟ್ಗಳ ದಾಖಲೆಗಳನ್ನು ಇ.ಡಿಗೆ ನೀಡುತ್ತಿದ್ದಾರೆ. ಸಿದ್ದರಾಮಯ್ಯರ ಪತ್ನಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಹುಮುಖ್ಯ ದಾಖಲೆಯನ್ನು ಇ.ಡಿಗೆ ನೀಡಲಿದ್ದಾರೆ.