ನವದೆಹಲಿ: ಇಡಿ ವಿಚಾರಣೆಗೆ ಒಳಪಟ್ಟಿದ್ದ ಕಾಂಗ್ರೆಸ್ ನಾಯಕ ಯೂಸುಫ್ ಷರಿಫ್ ಅಲಿಯಾಸ್ ಕೆಜಿಎಫ್ ಬಾಬು ಅವರಿಗೆ ಪರಿಷತ್ ಚುನಾವಣೆಯೇ ಕಂಟಕವಾಗುವ ಸಾಧ್ಯತೆಗಳಿದೆ. ಇಡಿ ವಿಚಾರಣೆ ವೇಳೆ ಪರಿಷತ್ ಚುನಾವಣೆ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಕೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ಮೇ 28 ರಂದು ನಡೆದ ಇಡಿ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕೆಜಿಎಫ್ ಬಾಬುಗೆ ಸಮನ್ಸ್ ನೀಡಲಾಗಿತ್ತು. ಸಮನ್ಸ್ ಹಿನ್ನೆಲೆಯಲ್ಲಿ ನಿನ್ನೆ ಮತ್ತು ಇಂದು ಅವರು ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ನಿನ್ನೆ ಸುಮಾರು ಎಂಟು ಗಂಟೆ ಮತ್ತು ಇಂದು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು 14 ಪುಟಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರಿಯಾದ ಅಫ್ಘಾನಿಸ್ತಾನದ ಫೇಮಸ್ ಟಿವಿ ಆ್ಯಂಕರ್
ವಿಚಾರಣೆ ವೇಳೆ ಕೆಜಿಎಫ್ ಬಾಬು ಹಣಕಾಸು ವ್ಯವಹಾರ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ವಿಶೇಷವಾಗಿ ಪರಿಷತ್ ಚುನಾವಣೆ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಮೂಲ ವ್ಯವಹಾರಗಳನ್ನು ಬಿಟ್ಟು ರಾಜಕೀಯಕ್ಕೆ ಬಂದಿದ್ದೇಗೆ, ಚುನಾವಣೆಗೆ ಮಾಡಿದ ಖರ್ಚು – ವೆಚ್ಚಗಳ ಬಗ್ಗೆಯೂ ವರದಿ ಕೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ಇದರ ಜೊತೆಗೆ ಬಾಬು ಅವರ ಆಸ್ತಿ ಮತ್ತು ಹೂಡಿಕೆ ಮೇಲೆ ನಿಗಾ ಇಟ್ಟಿರುವ ಇಡಿ ಈ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿದೆ. ಎರಡು ದಿನಗಳ ವಿಚಾರಣೆ ಬಳಿಕ ಶೀಘ್ರದಲ್ಲಿ ಮತ್ತೊಂದು ಸಮನ್ಸ್ ನೀಡಲಿದ್ದು ಅಂದು ದಾಖಲೆಗಳ ಸಹಿತ ವಿಚಾರಣೆಗೆ ಬರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳೇ ಕೆಜಿಎಫ್ ಬಾಬು ಅವರನ್ನು ವಿಚಾರಣೆ ನಡೆಸುತ್ತಿರುವುದು ಗಮನಾರ್ಹ ಸಂಗತಿ.