ಹಾಸನ: ಕಳೆದ ಐದು ದಿನಗಳ ಹಿಂದೆ ಹಾಸನ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆದಿದ್ದು, ಇಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎನ್ ಪ್ರಕಾಶ ಗೌಡ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.
ಕಳೆದ ವಾರವಷ್ಟೇ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರನ್ನ ವರ್ಗಾವಣೆ ಮಾಡಿದ್ದ ಚುನಾವಣಾ ಆಯೋಗ ನೂತನ ಡಿಸಿಯಾಗಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನ ನೇಮಕ ಮಾಡಿತ್ತು. ಈಗ ಹಾಸನ ಜಿಲ್ಲಾ ವರಿಷ್ಠಾಧಿಕಾರಿ ಡಾ.ಎನ್ ಪ್ರಕಾಶ್ ಗೌಡರ ಜಾಗಕ್ಕೆ ಎಫ್ಎಸ್ಎಲ್ನಲ್ಲಿ ನಿರ್ದೇಶಕರಾಗಿದ್ದ ಚೇತನ್ ಸಿಂಗ್ ರಾಥೋಡ್ ಅವರನ್ನ ನೇಮಕ ಮಾಡಿದೆ.
ಸದ್ಯ ಪ್ರಕಾಶ್ ಗೌಡ ಅವರನ್ನು ಹಳೆ ಪ್ರಕರಣವೊಂದರ ಸಂಬಂಧ ವರ್ಗ ಮಾಡುವಂತೆ ಬಿಜೆಪಿ ದೂರು ನೀಡಿತ್ತು ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ. 2009ರ ಲೋಕಸಭಾ ಚುನಾವಣೆ ವೇಳೆ ಚನ್ನಪಟ್ಟಣ ಜೆಡಿಎಸ್ ಮುಖಂಡನ ಮನೆ ಅಕ್ರಮ ಹಣ ಸಿಕ್ಕಿತ್ತು. ಅಂದು ಡಿಎಸ್ಪಿ ಆಗಿದ್ದ ಪ್ರಕಾಶ್ ಗೌಡ ಅವರು ಸೂಕ್ತ ಕ್ರಮ ಕೈಗೊಳ್ಳದ ಆರೋಪವನ್ನು ಬಿಜೆಪಿ ಮಾಡಿತ್ತು. ಈ ಸಂಬಂಧ ಪ್ರಕಾಶ್ ಗೌಡ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ತನಿಖೆ ನಂತರ ಪ್ರಕಾಶ್ ಗೌಡ ಅಮಾನತುಗೊಂಡಿದ್ದರು. ಚನ್ನಪಟ್ಟಣದಂತೆ ಹಾಸನವೂ ಜೆಡಿಎಸ್ ಪ್ರಬಲ್ಯ ಇರುವ ಜಿಲ್ಲೆ. ಹೀಗಾಗಿ ಎಸ್ಪಿ ಅವರನ್ನು ವರ್ಗ ಮಾಡುವಂತೆ ಬಿಜೆಪಿ ಮನವಿ ಮಾಡಿತ್ತು.
ಈ ಹಿಂದೆ ಬಿಜೆಪಿ ಶಾಸಕ ಪ್ರೀತಂಗೌಡ ಚುನಾವಣಾ ಆಯೋಗಕ್ಕೆ ದೂರು ನೀಡಿ ಡಿಸಿ ಅವರನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು. ಈ ದೂರನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿತ್ತು.