ವಿಜಯಪುರ: ಭಾರೀ ಶಬ್ದ ಹಾಗೂ ಭೂಮಿ ಕಂಪಿಸಿದ ಅನುಭವ ವಿಜಯಪುರದಲ್ಲಿ ಆಗಿದೆ.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದಲ್ಲಿ ಮೂರು ದಿನದಿಂದ ನಿತ್ಯ ರಾತ್ರಿ ಭಾರೀ ಸದ್ದು ಮತ್ತು ಭೂಮಿ ನಡುಗಿದ ಅನುಭವಾಗಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಭಾರೀ ಶಬ್ದದಿಂದ ಗ್ರಾಮಸ್ಥರು ಮೂರು ದಿನಗಳ ಕಾಲ ರಾತ್ರಿ ವೇಳೆ ನಿದ್ದೆ ಮಾಡದೆ ಭಯದ ವಾತಾವರಣದಲ್ಲಿ ಕಾಲ ಕಳೆದಿದ್ದಾರೆ. ಮೊದಲ ದಿನ ಗ್ರಾಮದ ಸುತ್ತಲಿನ ಜಲ್ಲಿ ಕಲ್ಲಿನ ಕಾರ್ಖಾನೆ ಶಬ್ದ ಇರಬಹುದು ಎಂದು ಸುಮ್ಮನಾಗಿದ್ದಾರೆ. ಆದರೆ ಈ ಕುರಿತು ಜಲ್ಲಿ ಕಲ್ಲಿನ ಕಾರ್ಖಾನೆಯ ಮಾಲೀಕರನ್ನು ವಿಚಾರಿಸಿದರೆ ನಾವು ಯಾವುದೇ ಬ್ಲಾಸ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ. ಭಾರೀ ಸದ್ದು ಹಾಗೂ ಕಂಪನದಿಂದ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಅಲ್ಲದೆ ಕೆಲ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಇದು ಭೂಕಂಪನವೋ ಅಥವಾ ಜಲ್ಲಿ ಕಲ್ಲಿನ ಬ್ಲಾಸ್ಟ್ ಸದ್ದೋ ಎಂಬುದು ಗ್ರಾಮಸ್ಥರಿಗೆ ತಿಳಿಯುತ್ತಿಲ್ಲ. ಹೀಗಾಗಿ ಅನಾಹುತ ಆಗುವ ಮುನ್ನ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಕುರಿತು ತಿಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.