– ಡಿಕೆಶಿ ಕನಸಿನ ಕೂಸಿಗೆ ವಿಲನ್ ಆದ್ರ ಜಿಬಿಎ ಅಧಿಕಾರಿಗಳು?
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇ-ಖಾತಾ ಗೋಲ್ಮಾಲ್ ನಡೆದಿದೆ. ಇದರಲ್ಲಿ ಜಿಬಿಎ ಅಧಿಕಾರಿಗಳೇ ಶಾಮೀಲಾಗಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಜನರ ಇ-ಖಾತಾ ಕನಸಿಗೆ ಜಿಬಿಎ ಅಧಿಕಾರಿಗಳೇ ಕೊಳ್ಳಿ ಇಟ್ಟಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸಿಗೆ ಅಧಿಕಾರಿಗಳೇ ವಿಲನ್ ಆಗಿದ್ದಾರೆ ಎಂದು ಆರೋಪಿಸಲಾಗಿದೆ.
ಸಾವಿರಾರು ಇ-ಖಾತಾ ಅರ್ಜಿಗಳನ್ನು ಉದ್ದೇಶಪೂರ್ವಕವಾಗಿ ಅಧಿಕಾರಿಗಳು ರಿಜೆಕ್ಟ್ ಮಾಡಿದ್ದಾರೆ. ಜಿಬಿಎ ಉಪ ಆಯುಕ್ತ ಆಡಳಿತ ವಿಭಾಗದಿಂದ ನಗರಾಭಿವೃದ್ಧಿ ಇಲಾಖೆಗೆ ಬಹಿರಂಗ ಪತ್ರ ಕಳುಹಿಸಲಾಗಿದೆ. ಇದರಲ್ಲಿ ಜಿಬಿಎ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ‘ಪಬ್ಲಿಕ್ ಟಿವಿ’ಗೆ ಈ ಪತ್ರದ ಪ್ರತಿ ಲಭ್ಯವಾಗಿದೆ.
ಇ-ಖಾತಾ ಅರ್ಜಿಗಾಗಿ ಸಾರ್ವಜನಿಕರ ದಾಖಲೆ ಸರಿಯಾಗಿದ್ರೂ ಉದ್ದೇಶಪೂರ್ವಕವಾಗಿ ಇ-ಖಾತಾ ಕೊಡದೇ ಅಧಿಕಾರಿಗಳು ಆಟವಾಡಿಸುತ್ತಿದ್ದಾರೆ. ಅಧಿಕಾರಿಗಳ ಉದ್ಧಟತನದಿಂದ ಉದ್ದೇಶಪೂರ್ವಕವಾಗಿ ಸಾವಿರಾರು ಅರ್ಜಿಗಳ ತಿರಸ್ಕೃತಗೊಂಡಿವೆ. ಸಾರ್ವಜನಿಕರಿಗೆ ಇ-ಖಾತಾ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆಂದು ಪತ್ರದಲ್ಲಿ ದೂರಲಾಗಿದೆ. ಬೊಮ್ಮನಹಳ್ಳಿ ವಲಯ ಉಪ ಆಯುಕ್ತ ಹಾಗೂ ಬಿಟಿಎಂ ಲೇಔಟ್ ಕಂದಾಯ ಅಧಿಕಾರಿ ವಿರುದ್ಧ ಪತ್ರ ಬರೆದು ಶಿಸ್ತು ಕ್ರಮಕ್ಕೆ ಒತ್ತಾಯಿಸಲಾಗಿದೆ.
ಪತ್ರದಲ್ಲಿ ಏನಿದೆ?
ಜಯನಗರ ನಿವಾಸಿ ಮುರಳೀಧರ್ ಅನ್ನೋರಿಂದ ಇ-ಖಾತಾಗೆ ಅರ್ಜಿ ಸಲ್ಲಿಕೆಯಾಗಿತ್ತು. ವ್ಯಕ್ತಿ ಸೂಕ್ತ ದಾಖಲೆಯನ್ನು ನೀಡಿದ್ದರು. ಆದರೆ, ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ಸರಿಯಿಲ್ಲ ಅಂತ ಖಾತೆ ನೀಡದೆ ತಿರಸ್ಕರಿಸಿದ್ದಾರೆ. ಅಂತಿಮ ಖಾತೆ ಪಡೆಯಲು ಬೇಕಾದ ದಾಖಲೆ ನೀಡಿದ್ರೂ ರಿಜೆಕ್ಟ್ ಮಾಡಲಾಗಿದೆ. ಹೀಗೆ, ಸಾವಿರಾರು ಅರ್ಜಿಗಳನ್ನು ವಿನಾಕಾರಣ ರಿಜೆಕ್ಟ್ ಮಾಡಲಾಗಿದೆ ಎಂದು ಆರೋಪಿಸಿ ಉಪ ಆಯುಕ್ತರು ಆಡಳಿತ ವಿಭಾಗದಿಂದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ.
ಇದು ಗಂಭೀರ ಪ್ರಕರಣ. ಇಂತಹ ಅಧಿಕಾರಿಗಳಿಗೆ ಯಾವುದೇ ದಯೆ ತೋರದೆ ಕ್ರಮ ಜರುಗಿಸಿ. ತಕ್ಷಣ ಅವರನ್ನು ಅಮಾನತು ಮಾಡಿ ಎಂದು ಇಲಾಖೆಗೆ ಪತ್ರ ಬರೆಯಲಾಗಿದೆ.

