ಬೆಂಗಳೂರು: ಗಾಂಜಾ ಮತ್ತಿನಲ್ಲಿ ಕಿಡಿಗೇಡಿಗಳ ಗುಂಪೊಂದು ಆಟೋಗಳನ್ನು ಜಖಂಗೊಳಿಸುವ ಘಟನೆ ಬೆಂಗಳೂರಿನ ರಾಮಮೂರ್ತಿನಗರ ವಾರ್ಡ್ನ ಕಲ್ಕೆರೆ ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ.
ಈ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಸೇರಿದರೂ ಗ್ರಾಮಾಂತರ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮವಾಗಿದ್ದು, ಅಲ್ಲಿ ಕಳೆದ ಆರು ತಿಂಗಳಿನಿಂದ ಬೆಂಗಳೂರಿನ ಪುಂಡ ಪೋಕರಿಗಳ ಗುಂಪೊಂದು ಗಾಂಜಾ ಸೇವಿಸಿಕೊಂಡು ತಿರುಗಾಡುತ್ತಿದೆ. ಕಳೆದ ರಾತ್ರಿ ಪುಂಡರ ಗಾಂಜಾ ಹೆಚ್ಚಾಗಿ ಏರಿಯಾದಲ್ಲಿನ 7 ಆಟೋಗಳ ಗಾಜುಗಳನ್ನು ಪುಡಿ ಪುಡಿ ಮಾಡಿದಲ್ಲದೆ, ಮೂರು ಮನೆಗಳ ಕಿಟಕಿ ಗಾಜುಗಳನ್ನು ಬ್ಯಾಟ್ ಹಾಗೂ ದೊಣ್ಣೆಗಳಿಂದ ಒಡೆದು ಸ್ಥಳೀಯರಿಗೆ ಬೆದರಿಕೆ ಹಾಕಿ ದರ್ಪ ತೋರಿಸಿದ್ದಾರೆ.
ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಬರುವ ಗಾಂಜಾ ವ್ಯಸನಿಗಳು ಕಳೆದ ಐದಾರು ತಿಂಗಳಿಂದ ಇಲ್ಲಿನ ಮುನೇಶ್ವರ ಸ್ವಾಮಿ ದೇವಾಲಯವನ್ನು ಗಾಂಜಾ ಸೇವನೆಯ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸದ ಕಾರಣ ಈ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಸಂಸಾರಸ್ಥರು ಬೀದಿಯಲ್ಲಿ ಒಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ರಾತ್ರಿ 10 ರಿಂದ 15 ಯುವಕರ ತಂಡ ಇಲ್ಲಿನ ಅಟೋಗಳನ್ನು ಜಖಂ ಗೊಳಿಸಿ ಮನೆಗಳ ಮೇಲೆ ದಾಳಿ ಮಾಡಿ ಮನೆ ಮಾಲೀಕರಿಗೆ ಧಮ್ಕಿ ಹಾಕಿದ್ದು, ಆದಷ್ಟು ಬೇಗ ಪೊಲೀಸರು ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv