ಮೈಸೂರು: ಖದೀಮರ ಗುಂಪೊಂದು ಪೊಲೀಸರ ಸೋಗಿನಲ್ಲಿ ಬಂದು ವ್ಯಾಪಾರಿಯೊಬ್ಬರನ್ನು ನಂಬಿಸಿ ಅವರ ಬಳಿಯಿದ್ದ ವಾಚ್, ಚಿನ್ನದ ಚೈನ್ ಹಾಗೂ ಉಂಗುರವನ್ನು ಪಡೆದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಜಿಲ್ಲೆಯ ಎಂ.ಜಿ ರಸ್ತೆಯ ಜೆ.ಎಸ್.ಎಸ್ ಆಸ್ಪತ್ರೆ ಬಳಿ ನಂಜನಗೂಡು ಮೂಲದ ಗೋಪಾಲ್ ರಸ್ತೆ ಬದಿಯಲ್ಲಿ ನಿಂತಿರುವಾಗ ನಕಲಿ ಪೊಲೀಸರು ಅವರ ಬಳಿ ಬಂದಿದ್ದಾರೆ. ಈ ವೇಳೆ, ಈ ಪ್ರದೇಶದ ಸುತ್ತಾಮುತ್ತಾ ವಂಚಕರ ಹಾವಳಿ ಹೆಚ್ಚಾಗಿದೆ. ನಾವು ಪೊಲೀಸ್ ಸ್ಕ್ವಾಡ್, ವಂಚಕರನ್ನು ಪತ್ತೆ ಮಾಡಲು ಬಂದಿದ್ದೇವೆ ಎಂದು ನಂಬಿಸಿದ್ದಾರೆ.
ವ್ಯಾಪಾರಿಯನ್ನು ಮರಳುಮಾಡಿದ ಗುಂಪು ನಂತರ, ಮೊದಲು ನಿಮ್ಮ ಕೈಯಲ್ಲಿರೋ ವಾಚ್, ಕೊರಳಲ್ಲಿ ಇರುವ ಚಿನ್ನದ ಸರ ಹಾಗೂ ಉಗುರವನ್ನು ಬಿಚ್ಚಿ ಕಾರಿನಲ್ಲಿಡಿ ಎಂದು ಸೂಚಿಸಿದ್ದಾರೆ.
ತದನಂತರ ವ್ಯಾಪಾರಿ ಬಳಿ ಇದ್ದ ಚಿನ್ನಾಭರಣವನ್ನು ಬಿಚ್ಚಿಸಿಕೊಂಡು ಕಾರಿನಲ್ಲಿ ಇಡುವ ರೀತಿ ನಾಟಕ ಮಾಡಿ, ಲಪಟಾಯಿಸಿ ಪರಾರಿಯಾಗಿದ್ದಾರೆ. ವಂಚನೆ ಅರಿವಿಗೆ ಬಂದ ಬಳಿಕ ಮೋಸಹೋದ ವ್ಯಾಪಾರಿ ಪೊಲೀಸರ ಮೊರೆ ಹೋಗಿ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ನಗರದ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೈಸೂರಿನ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv