ಎಸಿಬಿ ಸೋಗಿನಲ್ಲಿ ಅಧಿಕಾರಿಗೆ ವಂಚನೆ – ಖತರ್ನಾಕ್ ಖದೀಮರು ಅಂದರ್

Public TV
1 Min Read
ctd arrest 1

ಚಿತ್ರದುರ್ಗ: ಸರ್ಕಾರಿ ಅಧಿಕಾರಿಗಳ ಭ್ರಷ್ಟತನ ಮನಗೊಂಡ ಕರ್ನಾಟಕ ಸರ್ಕಾರ ಜನರ ಹಿತದೃಷ್ಟಿ ಹಾಗೂ ಭ್ರಷ್ಟ ಅಧಿಕಾರಿಗಳ ಬೇಟೆಗಾಗಿ ಎಸಿಬಿ ಇಲಾಖೆಯನ್ನು ಜಾರಿಗೆ ತಂದಿದೆ. ಆದರೆ ಈ ಇಲಾಖೆಯ ಹೆಸರನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಿಯೊಬ್ಬರನ್ನು ಬೆದರಿಸಿ, ವಂಚಿಸಿದ್ದ ಖತರ್ನಾಕ್ ತಂಡವೊಂದು ಪೊಲೀಸರ ಅತಿಥಿಯಾಗಿದೆ.

ಈ ಖತರ್ನಾಕ್ ತಂಡವು ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ, ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಲ್.ಟಿ ಶ್ರೀರಂಗಪ್ಪ ಅವರ ಚಲನಾವಲನಗಳನ್ನು ಗಮನಿಸಿದ್ದರು. ಬಳಿಕ ನಿಮ್ಮ ಮೇಲೆ ಬೆಂಗಳೂರಿನ ಎಸಿಬಿ ಕೇಂದ್ರ ಕಛೇರಿಯಲ್ಲಿ ದೂರು ದಾಖಲಾಗಿದೆಯೆಂದು ಬೆದರಿಸಿ, ಅವರಿಂದ 1,24,000 ಸಾವಿರ ಹಣವನ್ನು ಖಾತೆಗೆ ಜಮಾ ಮಾಡಿಸಿಕೊಂಡಿದ್ದರು. ಅಲ್ಲದೆ ನಾವು ಚಿತ್ರದುರ್ಗದ ಎಸಿಬಿ ಇಲಾಖೆಯ ಡಿವೈಎಸ್‍ಪಿ ಎಂದು ಹೇಳಿ ಅಧಿಕಾರಿಯನ್ನು ವಂಚಿಸಿ ಹಣವನ್ನು ಅವರ ಖಾತೆಗೆ ಜಮಾ ಮಾಡಿಸಿಕೊಂಡಿದ್ದ ಖತರ್ನಾಕ್ ತಂಡವೊಂದನ್ನು ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ctd arrest 1 1

ಇವರ ಮೇಲೆ ಈ ಹಿಂದೆಯೂ ವಂಚನೆ ಆರೋಪದ ಮೇಲೆ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಹೀಗಾಗಿ ಪ್ರಕರಣದ ಹಾದಿ ಹಿಡಿದ ವೃತ್ತ ನಿರೀಕ್ಷಕ ಚನ್ನೇಗೌಡ ನೇತೃತ್ವದ ತಂಡ ಆರೋಪಿಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ರಜನಿಕಾಂತ್, ಚಿದಾನಂದ, ಅರುಳ್ ರೇಗಸ್, ಹೇದರ್, ಮುರಿಗೆಪ್ಪ ನಿಂಗಪ್ಪ ಕುಂಬಾರನನ್ನು ಬಂಧಿಸಲಾಗಿದೆ.

ctd arrest 2

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೊಬೈಲ್‍ಗಳು, ಸಿಮ್‍ಗಳು, ಒಂದು ಬೈಕ್, ಎರಡು ಚಿನ್ನದ ಉಂಗುರ ಮತ್ತು 52 ಸಾವಿರ ನಗದು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಿರಿಯೂರು ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅರುಣ್ ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *