ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಆ್ಯಂಡ್ ಟೀಂ ಪರಪ್ಪನ ಅಗ್ರಹಾರ ಜೈಲು ಸೇರಿದೆ. ಜೈಲಿನಲ್ಲಿ ತಲೆಯ ಮೇಲೆ ಕೈ ಹೊತ್ತು ದುನಿಯಾ ವಿಜಯ್ ಕುಳಿತ್ತಿದ್ರೆ, ಇತ್ತ ಪತ್ನಿಯರಾದ ನಾಗರತ್ನ ಮತ್ತು ಕೀರ್ತಿ ಪರಸ್ಪರ ಒಬ್ಬರ ಮೇಲೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶನಿವಾರ ರಾತ್ರಿ ಗಲಾಟೆಯಾದಾಗ ಮಗ ಸಾಮ್ರಾಟ್ ವಿಜಿ ಜೊತೆಯಲ್ಲೇ ಇದ್ದ ಅನ್ನೋದನ್ನ ತಿಳಿದ ಮೊದಲ ಪತ್ನಿ ನಾಗರತ್ನ ವಿಜಿ ಮನೆ ಬಳಿ ಹೋಗಿದ್ದಾರೆ. ಈ ವೇಳೆ ಎರಡನೇ ಪತ್ನಿ ಕೀರ್ತಿ ಪಟ್ಟಡಿ ಮತ್ತು ನಾಗರತ್ನ ಪರಸ್ವರ ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ನಾಗರತ್ನ ಗಿರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಮೂವರು ಮಕ್ಕಳನ್ನ ನನ್ನಿಂದ ದೂರ ಮಾಡಿರೋ ದುನಿಯಾ ವಿಜಯ್, ಅವರನ್ನು ಹಾಳು ಮಾಡುತ್ತಿದ್ದಾರೆ. ನನ್ನ ಮಗ ಹೇಗಿದ್ದಾನೆ ಅಂತಾ ನೋಡಲು ಹೋದಾಗ, 2ನೇ ಪತ್ನಿ ಕೀರ್ತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಗೂಂಡಾಗಳನ್ನ ಛೂ ಬಿಟ್ಟು ಬೆದರಿಸಿದ್ದು, ನನಗೆ ನ್ಯಾಯ ಬೇಕು. ಮಕ್ಕಳು ಬೇಕು ಎಂದು ದೂರು ನೀಡಿದ್ದಾರೆ.
ನಾಗರತ್ನ ನೀಡಿರುವ ದೂರಿನಲ್ಲಿ ಏನಿದೆ..?
ರವರಿಗೆ,
ಪೊಲೀಸ್ ಇನ್ಸ್ ಪೆಕ್ಟರ್,
ಗಿರಿನಗರ ಪೊಲೀಸ್ ಠಾಣೆ,
ಬೆಂಗಳೂರು ನಗರ.
560085
ಇಂದ,
ಶ್ರೀಮತಿ ನಾಗರತ್ನ ವೈಫ್ ಆಫ್ ವಿಜಯ್ (38 ವರ್ಷ)
#33, ನ್ಯೂ ಕೆಂಪೇಗೌಡ ಲೇಔಟ್,
ಬೆಂಗಳೂರು 85
ವಿಷಯ: ಕೀರ್ತಿ ಗೌಡ ಎಂಬುವವರ ವಿರುದ್ಧ ದೂರು
ಮಾನ್ಯರೇ,
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ದಿನಾಂಕ 23/09/2018ರ ಬೆಳಗ್ಗೆ ಸುಮಾರು 7 ಗಂಟೆಯಲ್ಲಿ ಟಿವಿ ನ್ಯೂಸ್ ನೋಡಿ ನನ್ನ ಗಂಡ ಹಾಗೂ ಇತರರು ಗಲಾಟೆಯಾಗಿ ಹೈಗ್ರೌಂಡ್ ಠಾಣೆಯಲ್ಲಿ ಇರುತ್ತಾರೆಂದು ಟಿವಿಯಲ್ಲಿ ನೋಡಿರುತ್ತೇನೆ . ನಂತರ ನನ್ನ ಮಕ್ಕಳು ನನ್ನ ಗಂಡನ ಜೊತೆ ಇದ್ದು, ಅವರಿಗೆ ಏನಾದ್ರೂ ತೊಂದರೆ ಆಗಿರಬಹುದೆಂದು ಎಂದು ಗಾಬರಿಯಿಂದ ಅವರಿದ್ದ ಆಡನ್ ಪಬ್ಲಿಕ್ ಸ್ಕೂಲ್ ಹತ್ತಿರ ಗಿರಿನಗರ ಇಲ್ಲಿನ ಮನೆಗೆ ಬಂದಿದ್ದೇನೆ. ದಿನಾಂಕ 23/09/2018 ರ ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಇದ್ದ ಕೀರ್ತಿಗೌಡ ಮತ್ತು ಅವರ ಜೊತೆ ಇಬ್ಬರು ಹುಡುಗರು ನನ್ನನ್ನು ಮನೆಯ ಒಳಗಡೆ ಬಿಡದೇ ಮಕ್ಕಳನ್ನು ಮಾತನಾಡಿಸದಂತೆ ತಡೆದು, ಅವಾಚ್ಯ ಶಬ್ದಗಳಿಂದ ಬೈದು. ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಏನು ಮಾಡಬೇಕು ಎಂದು ಗೊತ್ತಿದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.
ಕೈನಿಂದ ಕತ್ತಿಗೆ, ಹೊಟ್ಟೆಗೆ ಸಹೊಡೆದು ತಳ್ಳಿರುತ್ತಾರೆ. ನನ್ನ ಮಕ್ಕಳಿಗೆ ಆ ಕೀರ್ತಿಗೌಡ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿ ಭಯಪಡಿಸಿರುತ್ತಾಳೆ. ಆದ್ದರಿಂದ ನನಗೆ, ನನ್ನ ಮಕ್ಕಳಿಗೆ ಹಾಗೂ ನನ್ನ ಜೊತೆಯಲ್ಲಿರುವ ನನ್ನ ತಮ್ಮನಿಗೆ ತೊಂದರೆಯಾದರೆ ಇವರೇ ಕಾರಣರು. ಆದ್ದರಿಂದ ಕೀರ್ತಿಗೌಡ ಮತ್ತು ಇತರರನ್ನು ಸೂಕ್ತ ತಿಳುವಳಿಕೆ ಹೇಳಿ. ನಮ್ಮ ತಂಟೆಗೆ ಬರದಂತೆ ಸೂಕ್ತ ಬಂದೋಬಸ್ತ್ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅವಳು ನನ್ನ ಗಂಡನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ನನ್ನ ಮತ್ತು ನನ್ನ ಮಕ್ಕಳಿಗೆ ಪದೇ ಪದೇ ಕಿರುಕುಳ ನೀಡುತ್ತಿರುತ್ತಾಳೆ.
ಇಷ್ಟಕ್ಕೆಲ್ಲ ಕಾರಣ ನನ್ನ ಗಂಡನ ಜೊತೆ ಹೊಂದಿರೋ ಅನೈತಿಕ ಸಂಬಂಧ. ಅದ್ದರಿಂದ ಅವಳನ್ನು ನನ್ನ ಮಕ್ಕಳು ಹಾಗೂ ನನ್ನ ತಂಟೆಗೆ ಬಾರದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅವಳು ನನ್ನ ತಳ್ಳಿದಾಗ ನನ್ನ ಪ್ರಾಣ ರಕ್ಷಣೆಗೆ ನಾನು ಅವಳಿಗೆ ಒಂದೇರೆಡು ಏಟನ್ನು ಹೊಡೆದಿರುತ್ತೇನೆ. ನನಗೆ ನನ್ನ ಕಡೆಯವರಿಗೆ ಏನು ತೊಂದರೆಯಾಗದಂತೆ ತಮ್ಮಲ್ಲಿ ಕೇಳಿಕೊಳ್ಳವುದೇನೆಂದರೆ ನಮಗೆ ಏನಾದರು ತೊಂದರೆ ಆಗಬಹುದು ಎಂದು ನಮಗೆ ಪೊಲೀಸ್ ಪ್ರೊಟೆಕ್ಷನ್ ಬೇಕು ಎಂದು ಕೇಳಿಕೊಳ್ಳುತ್ತೇವೆ. ನನಗೆ ಹಾಗೂ ನನ್ನ ಮಕ್ಕಳಿಗೆ ಹಾಗೂ ನನ್ನ ತಮ್ಮನಿಗೆ ತೊಂದರೆ ಆದರೆ ಅದಕ್ಕೆ ಕೀರ್ತಿಗೌಡ ಹಾಗೂ ಅವಳ ಮನೆಯವರೇ ಕಾರಣ. ಆ ಕೀರ್ತಿಗೌಡರಿಗೆ ನನ್ನ ಗಂಡ ದುನಿಯಾ ವಿಜಯ್ ಸಹಾಯ ಮಾಡುವುದರಿಂದ ಅವರಿಬ್ಬರಿಂದ ಏನಾದರೂ ಆಗಬಹುದು ಆದ್ದರಿಂದ ನಮಗೆ ರಕ್ಷಣೆ ಕೊಡಿ .
ಇಂತಿ ತಮ್ಮ ವಿಶ್ವಾಸಿ,
ನಾಗರತ್ನ.
ನಾಗರತ್ನ ದೂರಿನ ಆಧಾರದ ಮೇಲೆ ಕೀರ್ತಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹಲ್ಲೆ, ಬೆದರಿಕೆ ಆರೋಪದಡಿ ಕೇಸ್ ಫೈಲ್ ಆಗಿದೆ. ಕೂಡಲೇ ಕೀರ್ತಿಯನ್ನ ಕರೆಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ರು. ಈ ವೇಳೆ, ನಾಗರತ್ನಾ ಅವ್ರೇ ನನ್ನ ಮೇಲೆ ಹಲ್ಲೆ ನಡೆಸಿದ್ರು ಅಂತಾ ಕೀರ್ತಿ ಆರೋಪಿಸಿದರು. ನಂತರ ಮುಚ್ಚಳಿಕೆ ಬರೆಸಿಕೊಂಡು ಕೀರ್ತಿಯನ್ನು ಪೊಲೀಸರು ಕಳುಹಿಸಿಕೊಟ್ಟರು. ನಂತರ ಕೀರ್ತಿ ಸಹ ನಾಗರತ್ನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ನಾಗರತ್ನ ವಿರುದ್ಧ ಸಹ ಎಫ್ಐಆರ್ ದಾಖಲಾಗಿದೆ. ಇಂದು ಇಬ್ಬರನ್ನೂ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv