ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ನಟ ದುನಿಯಾ ವಿಜಿ ರಿಲೀಸ್ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಂದ ಹೊರಗೆ ಕಾಲಿಟ್ಟ ಕೂಡಲೇ ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದ ಎರಡನೇ ಪತ್ನಿ ಕೀರ್ತಿಗೌಡರನ್ನು ಜಂಗ್ಲಿ ಅಪ್ಪಿಕೊಂಡರು.
ಇದೇ ವೇಳೆ ಜೈಲಿನ ಬಳಿ ನೆರೆದಿದ್ದ ಅಭಿಮಾನಿಗಳು ಜೈಕಾರ ಕೂಗಿದರು. ನಂತರ ಗಾಳಿ ಆಂಜನೇಯ ದೇವಸ್ಥಾನ ಮತ್ತು ದರ್ಗಾಕ್ಕೆ ಪತ್ನಿ ಸಮೇತ ಭೇಟಿ ನೀಡಿದರು. ಬಳಿಕ ಪರಸ್ಪರ ಸ್ವೀಟ್ಸ್ ತಿನ್ನಿಸಿಕೊಂಡು ದಂಪತಿ ಸಂಭ್ರಮಿಸಿದರು.
ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಎಲ್ಲೂ ಕೇಸಿನ ಬಗ್ಗೆ ಮಾತನಾಡಬಾರದು ಎಂದು ನಿಬಂಧನೆಯಿದೆ. ಹೀಗಾಗಿ ನಾನು ಮಾತನಾಡುವುದಿಲ್ಲ. ನನಗೆ ಹಾಗೂ ನನ್ನ ಸ್ನೇಹಿತರಿಗೆ ಜಾಮೀನು ನೀಡಿದಂತಹ ಮ್ಯಾಜಿಸ್ಟ್ರೇಟರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಏಕೆಂದರೆ ಎಷ್ಟೋ ಹಿತಶತ್ರುಗಳು ಜಾಮೀನು ಸಿಗಬಾರದು ಎಂದು ಕಾದುಕುಳಿತಿದ್ದರು. ಆದ್ರೆ ಮ್ಯಾಜಿಸ್ಟ್ರೇಟರ್ ನ್ಯಾಯವನ್ನು ಪರಿಶೀಲಿಸಿ ದೇವರ ಸಮಾನರಾಗಿದ್ದಾರೆ ಎಂದರು.
ಅಧಿಕಾರಿಗಳ ಕೈವಾಡದ ಬಗ್ಗೆ ಕುರಿತು ನಾನು ಮುಖಾಮುಖಿ ಮಾತನಾಡಲು ರೆಡಿಯಾಗಿದ್ದೇನೆ. ಮಾಧ್ಯಮಗಳು ಅವಕಾಶ ಮಾಡಿಕೊಟ್ಟರೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.
ಪತ್ನಿ ವಿರುದ್ಧದ ಹಲವು ಆರೋಪದ ವಿಚಾರದ ಕುರಿತು ಮಾತನಾಡಿದ ಅವರು, ನಾಗರತ್ನ ನಾಲ್ಕು ವರ್ಷದ ಹಿಂದೆ ನನ್ನ ಮರ್ಯಾದೆ ತೆಗೆದರು. ಅವರು ನನ್ನ ತಂದೆ-ತಾಯಿನ ಚೆನ್ನಾಗಿ ನೋಡಿಕೊಂಡಿಲ್ಲ. ನಾಗರತ್ನಗೆ ದೊಡ್ಡ ಮನೆಯನ್ನು ಕೊಟ್ಟು ನಾನು ಬಾಡಿಗೆ ಮನೆಯಲ್ಲಿದ್ದೇನೆ. ಮಗ ಮತ್ತು ಮಗಳಂದಿರ ಹೆಸರಿಗೆ ಆಸ್ತಿ ಬರೆದಿದ್ದೇನೆ. ನಾನು, ನನ್ನ ತಂದೆ-ತಾಯಿ ಸತ್ತರೆ ಮಣ್ಣಾಕೋಕೆ ಬರಬೇಡ ಅಂತ ವಿಲ್ ಮಾಡಿಟ್ಟಿದ್ದೇವೆ. ಆದರೆ ನಾಗರತ್ನ ಬಾಯಿಬಿಟ್ಟರೆ ಸುಳ್ಳೇ ಹೇಳೋದು ಎಂದರು.
ಜಂಗ್ಲಿ ಜೈಲು ಮುಕ್ತನಾಗುತ್ತಿದ್ದಂತೆಯೇ ರಾತ್ರಿ 11 ಗಂಟೆಗೆ ಎರಡನೇ ಪತ್ನಿ ಕೀರ್ತಿ ಜೊತೆ ಸುದ್ದಿಗೋಷ್ಠಿ ನಡೆಸಿದರು. ನನ್ನ ಮಗನಿಗೆ ಹೊಡೆದರು. ಇದಾದ ಬಳಿಕ ಗಲಾಟೆ ಆಯಿತು. ಆದರೆ ನಾನು ಮಾರುತಿ ಗೌಡಗೆ ಹೊಡೆದೇ ಇಲ್ಲ. ಅಲ್ಲದೇ ಮಾರುತಿ ಗೌಡನನ್ನು ನಾನು ಕಿಡ್ನಾಪ್ ಕೂಡ ಮಾಡಿಲ್ಲ. ನಾನು ಸ್ಟೇಷನ್ಗೆ ಹೋದ ಮೇಲೆ ಅವರ ಕಡೆಯ ಹುಡುಗರೇ ನನ್ನ ಮೇಲೆ ಮುಗಿಬಿದ್ದರು ಅಂತ ದುನಿಯಾ ವಿಜಿ ಹೇಳಿದ್ದಾರೆ. ಇದರಲ್ಲಿ ಕಾಣದ ಕೈಗಳ ಕೈವಾಡ ಇದೆ ಅಂತ ನೇರವಾಗಿ ಮಾಧ್ಯಮಗಳ ಮುಂದೆ ಅವರು ಆರೋಪಿಸಿದ್ರು. ಒಂದು ವೇಳೆ ಮಾರುತಿ ಗೌಡ, ಕಿಟ್ಟಿ ಬಂದರೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv