ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್ಗಳದ್ದೇ ಕಾರುಬಾರಾಗಿದೆ. ಜೀವರಕ್ಷಣೆ ಮಾಡಬೇಕಾದ ಹೆಲ್ಮೆಟ್ಗಳ ಬದಲಿಗೆ ರಸ್ತೆಯಲ್ಲೆಲ್ಲ ಕಳಪೆ ಗುಣಮಟ್ಟದ್ದೇ ಸೌಂಡ್ ಆಗಿದೆ. ಸಾವಿರ ರೂ. ಬದಲಿಗೆ ನೂರು ಇನ್ನೂರಕ್ಕೆ ಹೆಲ್ಮೆಟ್ ಸಿಗ್ತವೆ ಎಂದು ಸಾರ್ವಜನಿಕರು ಸಹ ಡಮ್ಮಿ ಹೆಲ್ಮೆಟ್ಗಳಿಗೆ ಮೊರೆ ಹೋಗಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ ಹೆಲ್ಮೆಟ್ ಕಡ್ಡಾಯಗೊಳಿಸುತ್ತಿದ್ದಂತೆ ಜಿಲ್ಲೆಯಲ್ಲಿ ಡಮ್ಮಿ ಹೆಲ್ಮೆಟ್ಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಸಾವಿರಾರು ರೂಪಾಯಿ ಕೊಟ್ಟು ಹೆಲ್ಮೆಟ್ ಖರೀದಿಸಿ ಜೀವ ಹಾನಿ ತಪ್ಪಿಸಿಕೊಳ್ಳುವ ಬದಲಿಗೆ ನೂರೋ ಇನ್ನೋರೋ ರೂ. ಕೊಟ್ಟು ಡಮ್ಮಿ ಹೆಲ್ಮೆಟ್ ಖರೀದಿಗೆ ಮುಂದಾಗಿದ್ದಾರೆ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿಯೇ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ. ಆದರೆ ಹೆಲ್ಮೆಟ್ಗಳು ಕಳಪೆ ಗುಣಮಟ್ಟದ್ದಾಗಿದ್ದು, ಜೀವಹಾನಿ ತಪ್ಪಿಸುವಷ್ಟು ಗುಣಮಟ್ಟದ್ದಾಗಿಲ್ಲ. ಅಲ್ಲದೇ ಐಎಸ್ಐ ಮಾರ್ಕ್ ಕೂಡ ನಕಲಿಯದ್ದು ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಮೂಡಿದ್ರೆ, ಹೆಲ್ಮೆಟ್ ಮಾರಾಟಗಾರರು ತಾವು ಉತ್ತಮ ಗುಣಮಟ್ಟದ ಹೆಲ್ಮೆಟ್ಗಳನ್ನೇ ಮಾರಾಟ ಮಾಡುತ್ತಿರುವುದಾಗಿ ವಾದ ಮಾಡುತ್ತಿದ್ದಾರೆ.
ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ರೆ, ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದ್ರೆ, ಮದ್ಯಪಾನ ಮಾಡಿ ವಾಹನ ಓಡಿಸಿದ್ರೆ ನೂತನ ನಿಯಮದ ಪ್ರಕಾರ ಅಧಿಕ ದಂಡ ಫಿಕ್ಸ್ ಆಗಿದೆ. ಆದರು ಕೂಡ ವಾಹನ ಸವಾರರು ತಮ್ಮ ಹಳೆ ಚಾಳಿಯನ್ನು ಮಾತ್ರ ನಿಲ್ಲಿಸಿಲ್ಲ. ಹೆಲ್ಮೆಟ್ ಧರಿಸದೇ, ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುತ್ತಿದ್ದಾರೆ. ಇದಕ್ಕೆಲ್ಲಾ ಬ್ರೇಕ್ ಹಾಕುವ ಸಲುವಾಗಿ ರಾಮನಗರ ಎಸ್ಪಿ ಅನೂಪ್ ಶೆಟ್ಟಿಯವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹ ಸ್ಟ್ರಿಕ್ಟ್ ಆಗಿ ಕೆಲಸ ನಿರ್ವಹಿಸಲು ಕ್ರಮ ಕೈಗೊಂಡಿದ್ದಾರೆ.
ಹೆಲ್ಮೆಟ್ ಕಡ್ಡಾಯವಾಗಿದ್ದು ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ, ಜನರು ಮೊದಲು ಹೆಲ್ಮೆಟ್ ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಲಿ. ಆ ನಂತರ ಡಮ್ಮಿ ಹೆಲ್ಮೆಟ್ಗಳ ಹಾವಳಿ ಹಾಗೂ ನಕಲಿ ಐಎಸ್ಐ ಮಾರ್ಕ್ ಹೊಂದಿರುವ ಕಳಪೆ ಗುಣಮಟ್ಟದ ಹೆಲ್ಮೆಟ್ಗಳ ಬಗ್ಗೆ ಸದ್ಯದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಜನರು ಕೂಡ ನಿಯಮಗಳು ರೂಪಿತವಾಗಿರುವುದು ಯಾರಿಗೆ ಎಂಬುದನ್ನು ಅರ್ಥ ಮಾಡಿಕೊಂಡು ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದ್ದಾರೆ.