ವಿಜಯಪುರ: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಅಲ್ಲಿನ ಉಜನಿ ಜಲಾಶಯದಿಂದ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡಲಾಗಿದೆ.
ಉಜನಿ ಜಲಾಶಯದಿಂದ ಹರಿದು ಬಂದ ಅಪಾರ ಪ್ರಮಾಣದ ನೀರು ಜಿಲ್ಲೆಯ ಇಂಡಿ ತಾಲೂಕಿನ ಉಮರಜ ಬಳಿ ಹರಿಯುವ ಭೀಮಾ ನದಿಗೆ ಬಂದು ಸೇರಿದೆ. ಭೀಮಾ ನದಿ ತುಂಬಿ ಹರಿಯುತ್ತಿರುವುದರಿಂದ ಅಲ್ಲಿನ ರೈತರು ಸಂತಸಗೊಂಡಿದ್ದಾರೆ.
ಜಿಲ್ಲೆಯಾದ್ಯಂತ ಕೂಡ ಉತ್ತಮ ಮಳೆ ಆಗಿರುವುದರಿಂದ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಬಳಿಯ ಡೋಣಿ ಸೇತುವೆ ತುಂಬಿ ಹರಿದಿದೆ. ತುಂಬಿ ಹರಿದ ಸೇತುವೆ ಮೇಲೆಯೇ ಅನಾಹುತ ಲೆಕ್ಕಿಸದೆ ಸರ್ಕಾರಿ ಬಸ್, ಬೈಕ್ ಸವಾರರು, ಸ್ಥಳಿಯರು ಹಾಗೂ ಗ್ರಾಮಸ್ಥರು ಸಂಚಾರ ಮಾಡಿದ್ದಾರೆ.
ಹಡಗಿನಾಳ, ಶಿವಪುರ, ಮೂಕಿಹಾಳ, ನಾಗೂರು, ಹರನಾಳ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು ಸಂಚಾರ ಬಂದ್ ಆಗಿದೆ. ಸೇತುವೆಯನ್ನು ಎತ್ತರಿಸಬೇಕೆಂದು ಸ್ಥಳೀಯರ ಒತ್ತಾಯ ಮಾಡಿದ್ದಾರೆ.