ಪರಭಾಷೆಯ ಚಿತ್ರಗಳು ತೆಲುಗಿಗೆ ಡಬ್ ಆಗಿ ಬಂದು ಮೂಲ ತೆಲುಗು ಸಿನಿಮಾಗಳಿಗೆ ತೊಂದರೆ ಮಾಡುತ್ತಿವೆ ಎಂದು ಅಲ್ಲಿನ ನಿರ್ಮಾಪಕರು ದೂರಿದ್ದಾರೆ. ಈ ಕಾರಣದಿಂದಾಗಿಯೇ ಅವರು ಮಹತ್ವದ ನಿರ್ಣಯವೊಂದನ್ನು ತಗೆದುಕೊಂಡಿದ್ದು, ಹಬ್ಬಗಳಲ್ಲಿ ಹೆಚ್ಚೆಚ್ಚು ತೆಲುಗು ಸಿನಿಮಾಗಳಿಗೆ ಚಿತ್ರಮಂದಿರ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಡಬ್ಬಿಂಗ್ ಸಿನಿಮಾಗಳಿಗೆ ಕಡಿವಾಣ ಹಾಕುವಂತಹ ಕೆಲಸಗಳು ಆಗಬೇಕು ಎಂದು ಹೇಳಿದ್ದಾರೆ.
ಡಬ್ಬಿಂಗ್ ಸಿನಿಮಾಗಳಿಂದ ಮೂಲ ತೆಲುಗು ಚಿತ್ರಗಳಿಗೆ ಹಾನಿ ಆಗುತ್ತಿರುವುದನ್ನು ಗಮನಿಸಿ ಇಂಥದ್ದೊಂದು ತೀರ್ಮಾನ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಡ ಹಬ್ಬಗಳಲ್ಲಿ ಈ ಬಾರಿ ತೆಲುಗಿಗಿಂತ ಬೇರೆ ಭಾಷೆ ಚಿತ್ರಗಳೇ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದ್ದು, ಅಲ್ಲಿನ ನಿರ್ಮಾಪಕರಿಗೆ ನಿದ್ದೆಗೆಡಿಸಿದೆ. ಅಲ್ಲದೇ, ಕೆಲವರು ಬೇರೆ ಭಾಷೆಯ ಸಿನಿಮಾಗಳಿಗೆ ಮಣೆ ಹಾಕುತ್ತಿರುವುದರಿಂದ ತೆಲುಗು ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ:ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ
ನಿರ್ಮಾಪಕರೆಲ್ಲ ಒಟ್ಟಾಗಿ ತೆಲುಗು ಚಿತ್ರೋದ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಹಲವು ಮೀಟಿಂಗ್ ಗಳನ್ನು ಮಾಡಿದ್ದು, ಅದರಲ್ಲಿ ಕೆಲ ನಿರ್ಣಯಗಳನ್ನೂ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ದೊಡ್ಡ ಹಬ್ಬಗಳಲ್ಲಿ ಚಿತ್ರಮಂದಿರಗಳು ತೆಲುಗು ಸಿನಿಮಾಗೇ ಮೀಸಲಿಡಬೇಕು. ಆ ವೇಳೆಯಲ್ಲಿ ಆದಷ್ಟು ಡಬ್ಬಿಂಗ್ ಸಿನಿಮಾಗಳನ್ನು ದೂರಿಡಬೇಕು ಎನ್ನುವುದು ಅಲ್ಲಿನ ನಿರ್ಮಾಪಕರ ಆಗ್ರಹ ಕೂಡ ಆಗಿದೆಯಂತೆ.
ತೆಲುಗು ನಿರ್ಮಾಪಕರು ಅಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ನೇರವಾಗಿ ಕೆಜಿಎಫ್ 2, ಕಾಂತಾರ ಸಿನಿಮಾ ಕಾರಣ ಎನ್ನವ ಚರ್ಚೆಯೂ ಆಗುತ್ತಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಕೋಟಿ ಕೋಟಿ ಬಾಚಿದ್ದರಿಂದ ನಿರ್ಮಾಪಕರು ಒಟ್ಟಾಗಿ, ಚರ್ಚಿಸಿ ಇಂಥದ್ದೊಂದು ತೀರ್ಮಾನ ತಗೆದುಕೊಳ್ಳಲು ಒಂದಾಗಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.