ತುಮಕೂರು: ಕುಡಿದ ಅಮಲಿನಲ್ಲಿದ್ದ ಕಾರಿನ ಚಾಲಕನೊಬ್ಬನು ಕರ್ತವ್ಯ ನಿರತರಾಗಿದ್ದ ಪಿಎಸ್ಐ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ ಪರಿಣಾಮ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಉಪ್ಪಾರಳ್ಳಿ ಬಳಿ ನಡೆದಿದೆ.
ತುಮಕೂರು ನಗರದ ಜಯನಗರ ಠಾಣಾ ಪಿಎಸ್ಐ ನವೀನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ ವೇಳೆ ಉಪ್ಪಾರಳ್ಳಿ ಅಂಡರ್ ಪಾಸ್ ಬಳಿ ಎರ್ಟಿಗಾ ಕಾರು ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ. ಇದನ್ನು ಗಮನಿಸಿದ ಪಿಎಸ್ಐ ನವೀನ್ ವಾಹನ ತಡೆದು ನಿಲ್ಲಿಸಿ, ಫೈನ್ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ಸ್ಥಳದಿಂದ ಕಾರಿನೊಂದಿಗೆ ತಪ್ಪಿಸಿಕೊಳ್ಳಲು ಚಾಲಕ ಮುಂದಾಗಿಕ್ಕೆ ಸ್ಟೇರಿಂಗ್ ಹಿಡಿದು ಮುಂದೆ ಹೋಗದಂತೆ ಪಿಎಸ್ಐ ತಡೆದಿದ್ದಾರೆ.
ಮೊದಲೇ ಕುಡಿದ ನಶೆಯಲ್ಲಿದ್ದ ಚಾಲಕ ಪಿಎಸ್ಐ ತನ್ನನ್ನು ತಡೆದಿದ್ದಕ್ಕೆ ಕೋಪಗೊಂಡಿದ್ದಾನೆ. ಅಲ್ಲದೇ ಸಿಟ್ಟಿಗೆದ್ದು ಪಿಎಸ್ಐ ಮೇಲೆಯೇ ವಾಹನ ಹತ್ತಿಸಲು ಪ್ರಯತ್ನ ಪಟ್ಟಿದ್ದಾನೆ. ಈ ಘಟನೆಯಲ್ಲಿ ಪಿಎಸ್ಐ ಮುಖ, ಕೈ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ದೂರು ನೀಡಿದ್ದು, ಆರೋಪಿ ಮೇಲೆ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv