ಹಾಸನ: ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ ಘಟನೆ ಹಾಸನದ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯಲ್ಲಿ ನಡೆದಿದೆ.
ನಾಗೇಶ್ ಹಲ್ಲೆ ಮಾಡಿದ ಪೇದೆ. ನಾಗೇಶ್ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾತ್ರಿ 12.30ರ ವೇಳೆ ಬಸ್ ಕಾಯುತ್ತಿದ್ದ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 12.30ಕ್ಕೆ ಪ್ರೀತಿ ಫ್ಯಾಷನ್ ಅಂಗಡಿಯ ಇಬ್ಬರು ಯುವಕರು ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪೇದೆ ಸುಖಾಸುಮ್ಮನೆ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಪೇದೆ ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.
ಇಬ್ಬರು ಯುವಕರು ಅಂಗಡಿಯಲ್ಲಿ ಮಲಗಿ ನಂತರ ಬಸ್ಗೆ ಹೋಗುವಾಗ ಪೊಲೀಸ್ ಪೇದೆ ದರ್ಪ ತೋರಿದ್ದಾರೆ. ಕುಡುಕ ಪೇದೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ ಹೆಚ್ಚಾಗುತ್ತಿದ್ದು, ಪೇದೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಕಳೆದ ವಾರ ಚನ್ನರಾಯಪಟ್ಟಣ ಎಎಸ್ಐ ಒಬ್ಬರು ಬಟ್ಟೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ಸುದ್ದಿ ಆಗಿತ್ತು.