ಚಿಕ್ಕಬಳ್ಳಾಪುರ: ಕುಡಿದು ವಾಹನ ಚಲಾಯಿಸಬೇಡಿ ಅಂತ ಪೊಲೀಸರು ಎಷ್ಟೇ ಮನವಿ ಮಾಡಿಕೊಂಡ್ರು ಪ್ರಯೋಜನವಾಗುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಕಾರು ಚಾಲಕನೋರ್ವ ಕಂಠಪೂರ್ತಿ ಕುಡಿದು, ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್ ಸವಾರನನ್ನು ಬಲಿತೆಗೆದುಕೊಂಡ ಘಟನೆ ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಬೈಪಾಸ್ ನಲ್ಲಿ ನಡೆದಿದೆ.
ಬೆಂಗಳೂರಿನ ಬಿಡದಿ ನಿವಾಸಿ ಸ್ವರೂಪ್ (36) ಮೃತ ಬೈಕ್ ಸವಾರ. ಸ್ವರೂಪ್ ಹಾಗೂ ಲಾವಣ್ಯ ದಂಪತಿ ಆಂಧ್ರದ ಲೇಪಾಕ್ಷಿಗೆ ತೆರಳಿ, ಬೈಕ್ನಲ್ಲಿ ಬೆಂಗಳೂರಿಗೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ನಿವಾಸಿ ಶೇಖರಬಾಬು ಕುಡಿದ ಅಮಲಿನಲ್ಲಿ ಹಿಂದಿನಿಂದ ಬಂದು ಸ್ವರೂಪ್ ಅವರ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ 40 ವರ್ಷದ ಬೈಕ್ ಸವಾರ ಸ್ವರೂಪ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಹಿಂಬದಿ ಕೂತಿದ್ದ ಮೃತನ ಪತ್ನಿ ಲಾವಣ್ಯ ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಚಿಕ್ಕಬಳ್ಳಾಪುರ ನಗರ ಸಂಚಾರಿ ಪೊಲಿಸರು ಆರೋಪಿ ಶೇಖರ್ ಬಾಬುನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.