ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನೇ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗರಾಜು ತನ್ನ ಪತ್ನಿ ಗಾಯತ್ರಿ (24) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಗುಡಿಬಂಡೆ ಮೂಲದ ಗಾಯತ್ರಿ ಹಾಗೂ ನಾಗರಾಜುಗೆ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಟಾಟಾ ಏಸ್ ಚಾಲಕನಾಗಿದ್ದ ನಾಗರಾಜು, ತನ್ನ ಪತ್ನಿ ಗಾಯತ್ರಿ ಮೇಲೆ ಅನೈತಿಕ ಸಂಬಂಧದ ಆರೋಪ ಹೊರಿಸಿ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ.
ಗಂಡನ ಕಾಟ ತಾಳಲಾರದೆ ಗಾಯತ್ರಿ ಕೂಡ ತವರು ಮನೆ ಸೇರಿದ್ದಳು. ಆದರೆ ಶುಕ್ರವಾರ ರಾಜೀ ಪಂಚಾಯತಿ ಮಾಡಿ ಗಾಯತ್ರಿ ಮನೆಯವರು ಗಂಡನ ಮನೆಗೆ ಕಳುಹಿಸಿದ್ರು. ರಾತ್ರಿ ಪತಿ ಕುಡಿದು ಬಂದು ಗಾಯತ್ರಿ ಮೇಲೆ ಗಲಾಟೆ ಮಾಡಿದ್ದು, ಈ ವೇಳೆ ಗಾಯತ್ರಿಯ ಕತ್ತು ಹಿಸುಕಿ ಕೊಲೆ ಮಾಡಿ ತದನಂತರ ತಾನೇ ಬಂದು ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ಶರಣಾಗಿದ್ದಾನೆ.