ಮುಂಬೈ: ರೂಮ್ನ ಬಾಗಿಲನ್ನು ತೆಗೆಯಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ರೂಮ್ನಲ್ಲಿದ್ದ ಸ್ನೇಹಿತನನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಹನುಮಾನ್ ಪಾಟೀಲ್ (35) ಕೊಲೆಯಾದ ವ್ಯಕ್ತಿ. ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಸಾಯಿ (32) ಯನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಕಂಠಪೂರ್ತಿ ಕುಡಿದು ರೂಮ್ ಗೆ ಬಳಿ ಬಂದಿದ್ದ ಆರೋಪಿ ವಸಾಯಿ ತನ್ನ ರೂಮ್ ಮೇಟ್ಗೆ ಬಾಗಿಲು ತೆಗೆಯಲು ಹೇಳಿದ್ದಾನೆ. ಆದರೆ ಕುಡಿದು ಬಂದ ಹಿನ್ನೆಲೆಯಲ್ಲಿ ಹನುಮಾನ್ ರೂಮ್ ಬಾಗಿಲು ತೆಗೆಯದೇ ಒಂದು ಗಂಟೆ ಕಾಲ ಹೊರಗೆ ಕಾಯುವ ಹಾಗೆ ಮಾಡಿದ್ದಾನೆ.
ಒಂದು ಗಂಟೆಯ ನಂತರ ರೂಮ್ ಬಾಗಿಲು ತೆಗೆಯುತ್ತಿದ್ದಂತೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತೆರಳಿ ರೂಮ್ ನಲ್ಲಿದ್ದ ಮರದ ದೊಣ್ಣೆಯಿಂದ ವಸಾಯಿ ಹನುಮಾನ್ ಪಾಟೇಲ್ಗೆ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಹನುಮಾನ್ ಪಾಟೇಲ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಸ್ನೇಹಿತ ಮೃತಪಟ್ಟಿದ್ದನ್ನು ನೋಡಿದ ಬಳಿಕ ಯಾರಿಗೂ ಅನುಮಾನ ಬಾರದೇ ಇರಲೆಂದು ಶವವನ್ನು ನಗರದ ಹೊರ ವಲಯದಲ್ಲಿ ಎಸೆದಿದ್ದಾನೆ.
ಅಪರಿಚಿತ ಶವ ಪತ್ತೆಯಾಗಿ ಅನುಮಾನ ಹಿನ್ನೆಲೆಯಲ್ಲಿ ವಸಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.