ಕೋಲಾರ: ಗಾಂಜಾ ಮತ್ತಿನಲ್ಲಿದ್ದ ಯುವಕನೊಬ್ಬ ಇಬ್ಬರಿಗೆ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಕೋಲಾರ ತಾಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಗದ್ದೆಕಣ್ಣೂರು ಗ್ರಾಮದ ನಿವಾಸಿ ಕಿರಣ್ ಬಾಬು, ಅದೇ ಗ್ರಾಮದ ನಾಗೇಶ್ ಹಾಗೂ ನವೀನ್ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಂಜಾ ಮತ್ತಿನಲ್ಲಿ ಯುವಕ ಈ ಕೃತ್ಯವೆಸೆಗಿದ್ದಾನೆ. ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಜಗಳವಾಗಿದೆ. ಈ ವೇಳೆ ಮೊದಲೇ ಗಾಂಜಾದ ಮತ್ತಿನಲ್ಲಿ ಮುಳುಗಿದ್ದ ಕಿರಣ್ ಕೋಪಗೊಂಡಿದ್ದಾನೆ. ಬಳಿಕ ಏಕಾಏಕಿ ಚಾಕುವಿನಿಂದ ನಾಗೇಶ್ ಹಾಗೂ ನವೀನ್ ಮೇಲೆ ಹಲ್ಲೆ ಮಾಡಿದ್ದಾನೆ.
ಸದ್ಯ ಹಲ್ಲೆಗೆ ಒಳಗಾದ ಯುವಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಆರೋಪಿ ಕಿರಣ್ ಬಾಬುನನ್ನು ಪೊಲೀಸರ ವಶಕ್ಕೆ ಪಡೆದಿದ್ದು, ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.