ನವದೆಹಲಿ: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳನ್ನು ಪರಿಶೀಲಿಸಲಾಗಿದೆ. 94 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 115 ನಾಮಪತ್ರಗಳಲ್ಲಿ 107 ನಾಮಪತ್ರಗಳು ತಿರಸ್ಕೃತವಾಗಿವೆ.
ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅಂತಿಮವಾಗಿ ಇವರಿಬ್ಬರು ಕಣದಲ್ಲಿ ಉಳಿಯಲಿದ್ದಾರೆ ಎಂದು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ಏಕನಾಥ್ ಶಿಂಧೆ ಸಿಎಂ – ನಾನು ಸರ್ಕಾರದಲ್ಲಿ ಇರಲ್ಲ ಎಂದ ಫಡ್ನವೀಸ್
94 ಅಭ್ಯರ್ಥಿಗಳಿಂದ 115 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಅಗತ್ಯ ದಾಖಲೆಗಳಿರದ ಕಾರಣ 107 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಆರ್ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರ ಹೆಸರಿನ ವ್ಯಕ್ತಿಯೊಬ್ಬರು, ದೆಹಲಿಯ ಪ್ರೊಫೆಸರ್, ತಮಿಳುನಾಡಿನ ಸಾಮಾಜಿಕ ಹೋರಾಟಗಾರರೊಬ್ಬರು ಹಾಗೂ ಮುಂಬೈ ಕೊಳೆಗೇರಿಯ ನಿವಾಸಿಯೊಬ್ಬರು ನಾಮಪತ್ರ ಸಲ್ಲಿಸಿದ್ದರು. ಆರ್ಬಿಐ ಮತ್ತು ಸರ್ಕಾರದ ಖಜಾನೆಗೆ 15 ಸಾವಿರ ರೂ. ಠೇವಣಿ ಇಡದ ಕಾರಣಕ್ಕೆ ಬಹುತೇಕ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ.
ಮುರ್ಮು ಮತ್ತು ಸಿನ್ಹಾ ಅವರು ತಲಾ 4 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ಕ್ರಮಬದ್ಧವಾಗಿರುವುದರಿಂದ ಈ ಇಬ್ಬರ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್ ಶಾ, ಯೋಗಿಗೆ ಜೀವ ಬೆದರಿಕೆ – ಆರೋಪಿಯನ್ನು ಬಂಧಿಸಿ ಬಿಟ್ಟು ಕಳುಹಿಸಿದ ಪೊಲೀಸರು
ನಾಮಪತ್ರ ಹಿಂಪಡೆಯಲು ಜುಲೈ 2 ಅಂತಿಮ ದಿನವಾಗಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಗೆಜೆಟ್ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ: ಜುಲೈ 18ರಂದು ರಾಷ್ಟ್ರಪತಿ ಚುಮಾವಣೆ ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 6ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಜುಲೈ 13ರಿಂದಲೇ ನಾಮಪತ್ರ ಸಲ್ಲಿಕೆಯಾಗಲಿದೆ. ಹಾಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರ ಅಧಿಕಾರ ಅವಧಿಯು ಆಗಸ್ಟ್ 10 ರಂದು ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟವಾಗಲಿದೆ.