ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಅಡಿಯಲ್ಲಿ ರಾಜ್ಯಕ್ಕೆ 18,171 ಕೋಟಿ ರೂ. ಬರ ಪರಿಹಾರ ಕೋರಿ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿದ್ದು, ಇಂದು (ಸೋಮವಾರ) ಸುಪ್ರೀಂ ಕೋರ್ಟ್ನಲ್ಲಿ (Supreme Court) ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಬರ ಪರಿಹಾರ; ಕೇಂದ್ರ V/S ಕರ್ನಾಟಕ ಸರ್ಕಾರ – ರಾಜ್ಯ ‘ಸುಪ್ರೀಂ’ ಮೆಟ್ಟಿಲೇರಿದ್ಯಾಕೆ?
ಬರದ ಪ್ರಮಾಣ ಎಷ್ಟಿದೆ?
ರಾಜ್ಯವು ಕೇಂದ್ರ ಸರ್ಕಾರಕ್ಕೆ (Karnataka govt) ಸಲ್ಲಿಸಿದ ವರದಿ ಪ್ರಕಾರ, 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ. ಬರ ಪರಿಣಾಮದಿಂದಾಗಿ 48 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ (ಕೃಷಿ ಹಾಗೂ ತೋಟಗಾರಿಕಾ ಬೆಳೆ) ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 2023ರ ಅಕ್ಟೋಬರ್ನಲ್ಲಿ ನಷ್ಟ ಪರಿಶೀಲಿಸಲು ಅಂತರ-ಸಚಿವಾಲಯದ ಕೇಂದ್ರ ತಂಡ (ಐಎಂಸಿಟಿ) ಸಹ ರಾಜ್ಯಕ್ಕೆ ಭೇಟಿ ನೀಡಿತ್ತು. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ (ಜೂನ್) ಮಳೆಯ ಕೊರತೆ ಶೇ.56 ರಷ್ಟಿತ್ತು. ಅಂದರೆ 122 ವರ್ಷಗಳ ಬಳಿಕ ಈ ಪ್ರಮಾಣದ ಕೊರತೆ ಎದುರಾಗಿದೆ. ಜೊತೆಗೆ ಆಗಸ್ಟ್ ತಿಂಗಳಲ್ಲಿ ಶೇ.73 ಮಳೆ ಕೊರತೆ ಉಂಟಾಗಿದೆ.
ಅಷ್ಟೇ ಅಲ್ಲ ಕಳೆದ ವರ್ಷದ ಮಾನ್ಸೂನ್ ಸಮಯದಲ್ಲಿಯೂ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ 18% ಕಡಿಮೆ ಮಳೆಯಾಗಿದೆ. 2015ರ ಬಳಿಕ ಈ ಪ್ರಮಾಣದಲ್ಲಿ ಕಡಿಮೆ ಮಳೆ ಬಿದ್ದಿದೆ. ಮುಂಗಾರು ನಂತರದ ಅವಧಿಯು ಸಹ ರಾಜ್ಯಕ್ಕೆ ಹೆಚ್ಚಿನ ಮಳೆಯನ್ನು ತರಲಿಲ್ಲ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಇದನ್ನೂ ಓದಿ: ರಾಜ್ಯ ಸರ್ಕಾರ ಸುಳ್ಳು ಹೇಳ್ತಿದೆ, ಬರ ಪರಿಹಾರವನ್ನ ನ್ಯಾಯಾಲಯವೇ ತೀರ್ಮಾನಿಸಲಿ: ನಿರ್ಮಲಾ ಸೀತಾರಾಮನ್
ಬರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರದಿಂದ ಮೂರು ಬಾರಿ ಪತ್ರ ಬರೆದಿದ್ದರು, ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದರೂ, ಕೇಂದ್ರ ಸರ್ಕಾರ ಪರಿಹಾರ ಬಿಡುಗೆ ಮಾಡುವ ಮನಸ್ಸು ಮಾಡಿಲ್ಲ. ಆದ್ದರಿಂದ ಪರಿಹಾರ ಬಿಡುಗಡೆಗೆ ಕಟ್ಟಿನಿಟ್ಟಿನ ಸೂಚನೆ ನೀಡುವಂತೆ ಕರ್ನಾಟಕ ಸರ್ಕಾರ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ. ಇದನ್ನೂ ಓದಿ: ಇವಿಎಂ ಜೊತೆಗೆ ವಿವಿಪ್ಯಾಟ್ ಮತ ಎಣಿಕೆಗೆ ಆಗ್ರಹ – ವಿಚಾರಣೆಗೆ ಒಪ್ಪಿದ ಸುಪ್ರೀಂ