ಬೆಂಗಳೂರು: ನಾವು 18,000 ಕೋಟಿಗೆ ಮನವಿ ಸಲ್ಲಿಸಿದ್ದೆವು. ಸಮಸ್ಯೆ ಗಂಭೀರವಾಗಿರುವ ಆಧಾರದ ಮೇಲೆ ಪರಿಹಾರ ಕೇಳಿದ್ದೆವು. ಈಗ 3,400 ಕೋಟಿಯಷ್ಟು ಹಣ ಕೊಟ್ಟಿದ್ದಾರೆ. ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕೇಂದ್ರದಿಂದ ಬರ ಪರಿಹಾರ (Drought Relief) ಬಿಡುಗಡೆ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಿದ್ದೇವೆ. ಆದರೆ ಯಾವುದೇ ಅಧಿಕೃತ ದೃಢೀಕರಣ ಆಗಿಲ್ಲ. ನಾವು ಅಧಿಕೃತ ಆದೇಶದ ನೀರಿಕ್ಷೇಯಲ್ಲಿದ್ದೇವೆ ಎಂದರು. ಇದನ್ನೂ ಓದಿ: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದ ಕೇಂದ್ರ
ಅವರ ಬಳಿ ಸಮಯ ಇದ್ದಾಗ ರಾಜ್ಯಕ್ಕೆ ಪರ ಪರಿಹಾರ ಬಿಡುಗಡೆ ಅವಕಾಶ ತೆಗೆದುಕೊಂಡಿಲ್ಲ. ನಾಲ್ಕು ತಿಂಗಳು ನಾವು ನೀಡಿದ ಪತ್ರದ ಮೇಲೆ ಕೂತಿದ್ದರು. ಕರ್ನಾಟಕದ (Karnataka) ಹಕ್ಕಿಗೆ ಯಾವುದೇ ಬೆಲೆಯನ್ನೂ ಕೊಡಲಿಲ್ಲ. ಅವರ ಕೈಯಲ್ಲಿ ತೀರ್ಮಾನ ಇದ್ದಾಗ ರಾಜ್ಯಕ್ಕೆ ಕೊಡಬಾರದು ಅನ್ನೋ ಧೋರಣೆ ಹೊಂದಿದ್ದರು. ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಹಣ ಬಿಡುಗಡೆ ಮಾಡಬೇಕಿತ್ತು. ಬಿಡುಗಡೆ ಮಾಡದ ಕಾರಣ ನಾವು ಕೇಂದ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಅವಶ್ಯಕತೆ ಎದುರಾಯಿತು. ಕೋರ್ಟ್ನಲ್ಲಿ ಎರಡು ಬಾರಿ ಹಿಯರಿಂಗ್ ಆಗಿದೆ. ನಾವು ಕೊಟ್ಟಿರುವುದಕ್ಕೆ ಎಲ್ಲವೂ ಸರಿ ಇದೆ, ಕ್ರಮಬದ್ಧವಾಗಿತ್ತು. ಅದಕ್ಕೆ ಹೆಚ್ಚು ಚರ್ಚೆ ಆಗಲಿಲ್ಲ. ವಾದ ಬೇಡ ಅಂತ ಕೇಂದ್ರದ ಪರ ವಕೀಲರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಚಾಲನೆ
ನಾವು ಸೆಪ್ಟೆಂಬರ್ನಲ್ಲಿ ಪರಿಹಾರದ ಮನವಿ ಕೊಟ್ಟಿದ್ದೆವು. ಕೇಂದ್ರ ತಂಡ ಬಂದು ಅಧ್ಯಯನ ಮಾಡಿ ಹೋಗಿತ್ತು. ರಾಜ್ಯದ ಮನವಿಯನ್ನು ಕೇಂದ್ರ ತಡ ಮಾಡಿತ್ತು. ಕೇಂದ್ರದ ಸಚಿವರನ್ನು ಭೇಟಿ ಮಾಡಿದರೂ ಬಿಡುಗಡೆ ಮಾಡಿರಲಿಲ್ಲ. ನಾವು ಮನವಿ ಕೊಟ್ಟು ಏಳು ತಿಂಗಳು ಆಗಿತ್ತು. ಕರ್ನಾಟಕದ ಮನವಿಗೆ ಗೌರವ ಕೊಡಲಿಲ್ಲ. ಅದಕ್ಕಾಗಿ ನಾವು ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಹತ್ತಿದೆವು. ಕಾನೂನಿನ ಹೋರಾಟ ಮಾಡಬೇಕಾಯಿತು. ರಾಜ್ಯದ ಮನವಿಯನ್ನು ಕೋರ್ಟ್ ಪ್ರಶ್ನೆ ಮಾಡಲಿಲ್ಲ. ನಾವು ಸಮಯಕ್ಕೆ ಸರಿಯಾಗಿ ಎಲ್ಲಾ ಮನವಿ ಮಾಡಿದೆವು. ಕೇಂದ್ರದ ವಕೀಲರು ಮನವಿ ಮಾಡಿದರು. ನಾವು ನಿರ್ಧಾರ ಮಾಡಲು ಸಮಯ ಬೇಕು ಎಂದಿದ್ದರು. ನಮಗೆ ಹೋರಾಟದ ಮೂಲಕ ಬರ ಪರಿಹಾರ ಹಣ ಬಂದಿದೆ. ನಮಗೆ ಕಾನೂನು ಬದ್ಧವಾಗಿ ಬಂದಿರುವ ಹಣ ಇದು ಎಂದು ಹೇಳಿದರು. ಇದನ್ನೂ ಓದಿ: ಕೋಲ್ಕತ್ತಾ ಸೇರಿ ದೇಶದ 4 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ