ನವದೆಹಲಿ: ಇಂದು ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಆರಂಭಿಕರಾಗಿ ಶಿಖರ್ ಧವನ್ ಬದಲಾಗಿ ಕೆ.ಎಲ್.ರಾಹುಲ್ ಆಡಬೇಕು ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಚಾರಿ ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ ನಮ್ಮದಾಗಿಸಿಕೊಳ್ಳುವ ಉದ್ದೇಶವಿದ್ದರೆ, ಕೆ.ಎಲ್.ರಾಹುಲ್ ಅವರನ್ನು ಆರಂಭಿಕರಾಗಿ ಇಳಿಸಬೇಕು. ಈ ರೀತಿಯ ಪ್ರಯೋಗಗಳಿಂದ ಫಲಿತಾಂಶ ಏನು ಬರಲಿದೆ ಎಂಬುದನ್ನು ಅಂದಾಜಿಸಲು ಸಾಧ್ಯ. ಆರಂಭಿಕರಾಗಿ ಕ್ರೀಸ್ ಪ್ರವೇಶಿಸುವ ಶಿಖರ್ ಧವನ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
42 ಎಸೆತದಲ್ಲಿ 41 ರನ್ ಗಳಿಸಿದ ಉದಾಹರಣೆ ನೀಡುತ್ತಾ ಟೀಂ ಮ್ಯಾನೇಜಮೆಂಟ್ ಹೊಸ ಕಾಂಬಿನೇಷನ್ ಗಳನ್ನು ಗಮನಿಸಬೇಕು. ಕೆಲವು ದಿನಗಳಿಂದ ಟೀಂ ಇಂಡಿಯಾ ಪವರ್ ಪ್ಲೇನಲ್ಲಿ ನಿರೀಕ್ಷೆಯಂತೆ ಸ್ಕೋರ್ ಕಲೆ ಹಾಕುತ್ತಿಲ್ಲ. ರೋಹಿತ್ ಶರ್ಮಾಗೆ ಜೊತೆಯಾಗಿ ಆಕ್ರಮಣಕಾರಿಯಾಗಿ ಆಡುವ ಬ್ಯಾಟ್ಸ್ ಮನ್ ಅವಶ್ಯಕತೆಯಿದೆ. ಪವರ್ ಪ್ಲೇ ಓವರನ್ನು ಲಾಭವಾಗಿ ಬಳಸಿಕೊಳ್ಳುವ ಆಟಗಾರ ಟೀಂ ಇಂಡಿಯಾಗೆ ಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರಂಭಿಕರಾಗಿ ಮೈದಾನ ಪ್ರವೇಶಿಸುವ ಶಿಖರ್ ಧವನ್ ಹಿರಿಯ ಆಟಗಾರರಾಗಿದ್ದಾರೆ. ಅವರ ಬ್ಯಾಟಿಂಗ್ ಶೈಲಿ ನೋಡಿದ್ರೆ ಆಶ್ಚರ್ಯವಾಗುತ್ತದೆ. ಹಿರಿಯ ಆಟಗಾರರಾದ್ರೂ ಸಹಜ ಪ್ರದರ್ಶನ ನೀಡುತ್ತಿಲ್ಲ. ರೋಹಿತ್ ಶರ್ಮಾಗೆ ಜೊತೆಯಾಗಿ ಓರ್ವ ಒಳ್ಳೆಯ ಜೊತೆಗಾರನ ಅವಶ್ಯಕತೆ ಇದೆ ಎಂದಿದ್ದಾರೆ.
ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಆಡಿದ್ರೆ ರಿಷಭ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು. ಕೊಹ್ಲಿ ಔಟಾದ್ರೆ ಪಂತ್ ಪಂದ್ಯವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಸರಿ ಮಾಡಿಕೊಂಡರೆ ವಿಶ್ವಕಪ್ ಗೆಲ್ಲುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.