ಮಂಗಳೂರು: ಐಷೆರ್ ಟೆಂಪೋ ಲಾರಿಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಲಾರಿ ಚಾಲಕರಿಬ್ಬರು ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟುವಿನಲ್ಲಿ ಸಂಭವಿಸಿದೆ.
ಓರ್ವ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶಿಕಾರಿಪುರ ನಿವಾಸಿ ಮಂಜುನಾಥ ಸ್ಥಳದಲ್ಲೇ ಮೃತಗೀಡಾದ ಚಾಲಕ. ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಚಾಲಕನನ್ನು ಬೆಂಗಳೂರು ನೆಲಮಂಗಲ ನಿವಾಸಿ ನಾಗೇಶ್ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಬರುತ್ತಿದ್ದ ಲಾರಿಯು ಗೋಳಿತ್ತೊಟ್ಟು ಸೇತುವೆ ಬಳಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಮಂಗಳೂರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಎರಡು ಲಾರಿಗಳ ಮುಂಭಾಗ ಪರಸ್ಪರ ಅಂಟಿ ಹೋಗಿದ್ದು, ಚಾಲಕರು ಲಾರಿಯೊಳಗಡೆ ಸಿಲುಕಿಕೊಂಡಿದ್ದರು. ಬಳಿಕ ಜೆಸಿಬಿ ಬಳಸಿ ಲಾರಿಗಳನ್ನು ಬೇರ್ಪಡಿಸಿ ಚಾಲಕರನ್ನು ಹೊರತರಲಾಯಿತು.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.