ರಾಯ್ಪುರ: ಎಲ್ಲರನ್ನು ಬೆರಗುಗೊಳಿಸುವಂತಹ ಸಂಗತಿ ಇದು. ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ಚಲಿಸುತ್ತಿದ್ದ ಶಾಲಾ ವಾಹನದ ಚಕ್ರದ ಕೆಳಗೆ ಹೋಗಿ ಸ್ಪೀಡ್ಬ್ರೇಕರ್ ನಂತೆ ಅಡ್ಡಲಾಗಿ ಮಲಗಿ ವಾಹನವನ್ನು ನಿಲ್ಲಿಸಿ 25 ಶಾಲಾ ಮಕ್ಕಳನ್ನು ರಕ್ಷಿಸಿದ್ದಾರೆ.
ವಾಹನದ ಚಾಲಕ 30 ವರ್ಷದ ಶಿವ ಯಾದವ್ ಈ ಸಾಹಸವನ್ನು ಮಾಡಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವು ಮಕ್ಕಳಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಡೆದಿದ್ದೇನು?
ಛತ್ತೀಸ್ಗಢದ ರಾಯ್ಪುರದ ಕುನ್ಕುರಿ ನಾರಾಯಣಪುರ ಪ್ರಾಂತ್ಯದ ಮಕ್ಕಳನ್ನು ಪ್ರತಿದಿನದಂತೆ ಚಾಲಕ ಶಿವು ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಶಿವು ಒಂದು ಇಳಿಜಾರಿನ ಪ್ರದೇಶದಲ್ಲಿ ವಾಹನವನ್ನು ಮೊದಲ ಗೇರಿನಲ್ಲಿ ನಿಲ್ಲಿಸಿ ವಿರಾಮಕ್ಕಾಗಿ ಕೆಳಗೆ ಇಳಿದು ಹೋಗಿದ್ದಾರೆ.
ಈ ವೇಳೆ ವಾಹನದಲ್ಲಿದ್ದ ಮಗುವೊಂದು ಗೇರ್ ಎಳೆದಿದೆ. ಪರಿಣಾಮ ಗೇರ್ ನ್ಯೂಟ್ರಲ್ ಗೆ ಬಿದ್ದು, ವಾಹನ ಚಲಿಸಲು ಆರಂಭಿಸಿದೆ. ತಕ್ಷಣ ಶಿವು ಜೊತೆಗೆ ವಿರಾಮಿಸುತ್ತಿದ್ದ ಬೇರೊಬ್ಬ ಚಾಲಕ ಗಮನಿಸಿ ಶಿವುಗೆ ತಿಳಿಸಿದ್ದಾರೆ. ಆದರೆ ಶಿವುಗೆ ತಕ್ಷಣ ಏನು ಮಾಡಬೇಕು ಎಂದು ತೋಚಲಿಲ್ಲ.
ಬಳಿಕ ವಾಹನವನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ಸುತ್ತಮುತ್ತ ಕಲ್ಲಿಗಾಗಿ ಹುಡುಕುತ್ತಾರೆ. ಆದರೆ ಯಾವ ಕಲ್ಲು ಸಿಗಲಿಲ್ಲ. ಕೊನೆಗೆ ಚಿಂತಿಸಿ ಪ್ರಯೋಜನವಿಲ್ಲ ಎಂದು ತಾವೇ ವಾಹನದ ಚಕ್ರಕ್ಕೆ ಅಡ್ಡಲಾಗಿ ಮಲಗಿ ವಾಹನವನ್ನು ನಿಲ್ಲಿಸಿಸುತ್ತಾರೆ. ಬಳಿಕ ಸ್ಥಳದಲ್ಲಿದ್ದವರು ಬಂದು ವಾಹನವನ್ನು ನಿಲ್ಲಿಸಿ ಶಿವುವನ್ನು ಹೊರಗೆ ಎಳೆದಿದ್ದಾರೆ.
ಈ ಘಟನೆಯಿಂದ ವಾಹನದಲ್ಲಿದ್ದ ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ ಹೊರತು ದೊಡ್ಡ ಪ್ರಮಾಣದ ಅಪಘಾತವೇನು ಸಂಭವಿಸಿಲ್ಲ. ಇನ್ನು ಗಾಯಗೊಂಡಿದ್ದ ಚಾಲಕ ಶಿವುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.