-ಡ್ರಮ್ ಇರದಿದ್ರೆ ಬದುಕೇ ಇಲ್ಲ
ಚಿಕ್ಕಮಗಳೂರು: ಸಪ್ತ ನದಿಗಳ ನಾಡು ಚಿಕ್ಕಮಗಳೂರಿನ ಹಿರೇಗೌಜ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಜನರು ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಹಿರೇಗೌಜ ಗ್ರಾಮದ ನಲ್ಲಿಗಳಲ್ಲಿ ನೀರು ಬಂದು ವರ್ಷಗಳೆ ಕಳೆದಿವೆ. ಈಗ 10-15 ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಜನ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮನೆಯೊಂದಕ್ಕೆ 8-10 ದಿನಗಳಿಗೆ 3-4 ಡ್ರಮ್ ನೀರು. ಅದರಲ್ಲೇ ದನ-ಕರು, ಅಡುಗೆ, ಸ್ನಾನ ಎಲ್ಲ ಮಾಡಬೇಕು. ಇಲ್ಲಿ ಡ್ರಮ್ ಇರದಿದ್ದರೇ ಬದುಕೇ ಇಲ್ಲದಂತಾಗಿದೆ ಎಂದು ಸ್ಥಳೀಯ ಮಹಿಳೆಯರು ಹೇಳುತ್ತಿದ್ದಾರೆ.
ವಾರಕ್ಕೊಮ್ಮೆ ಪಂಚಾಯಿತಿ ಬಿಡುತ್ತಿರುವ ಟ್ಯಾಂಕರ್ ನೀರು ಶುದ್ಧವೋ-ಫ್ಲೋರೈಡ್ ನೀರೋ ಗೊತ್ತಿಲ್ಲ. ನೀರನ್ನ ಡ್ರಮ್ಗೆ ತುಂಬಿದ್ದಂತೆ ಬಿಳಿಯ ಪಾಚಿ ಹರಡುತ್ತೆ. ಅದನ್ನೆ ಕುಡೀಬೇಕು. ಟ್ಯಾಂಕರ್ ಬರದಿದ್ದರೆ 2-3 ಕಿಲೋ ಮೀಟರ್ ನಷ್ಟು ದೂರ ನೀರನ್ನ ಹೊರಬೇಕು. ನೀರನ್ನ ಹೊತ್ತು-ಹೊತ್ತು ಗ್ರಾಮದ ಗಂಡಸರ ತೋಳಲ್ಲಿ ಶಕ್ತಿಯೇ ಇಲ್ಲದಂತಾಗಿದೆ. ಹಣ ಕೊಟ್ಟು ನೀರು ತಗೆದುಕೊಳ್ಳೋದಾದರೆ ಒಂದು ಡ್ರಮ್ ನೀರಿಗೆ 50 ರೂಪಾಯಿ. ಆದರೆ ಈಗ ಹಣ ಕೊಡುತ್ತೀವಿ ಅಂದರು ಖಾಸಗಿಯವರು ನೀರು ತರಲ್ಲ. ಯಾಕಂದರೆ ಟ್ಯಾಂಕರ್ಗೆ ನೀರು ತುಂಬಲು ಕರೆಂಟ್ ಇರಲ್ಲ. ಹಾಗಾಗಿ ಸ್ಥಳೀಯರು ಶಾಸಕರು ಹಾಗೂ ಸಂಸದರು ಕೆಂಡಕಾರುತ್ತಿದ್ದಾರೆ ಎಂದು ಸ್ಥಳೀಯ ದೇವೇಂದ್ರ ತಿಳಿಸಿದ್ದಾರೆ.
ಚುನಾವಣೆಗು ಮುನ್ನ ನೀರು ಕೊಡುತ್ತೀವಿ, ರೋಡ್ ಮಾಡುತ್ತೀವಿ ನಿಮ್ಮ ಹಳ್ಳಿನ ಮಾದರಿ ಮಾಡುತ್ತೀವಿ ಅನ್ನೋ ಜನಪ್ರತಿನಿಧಿಗಳು ಗೆದ್ದ ಮೇಲೆ ಆ ಕಡೆ ತಲೆ ಹಾಕಿ ಮಲಗಲ್ಲ. ಅಧಿಕಾರಿಗಳಾದರೂ ನೀರು ಕೊಡುತ್ತಾರೆಂದರೆ ಅವರು ಬ್ಯುಸಿ. ಕಾಫಿನಾಡ ಜನ ಒಂದೆಡೆ ನೀರಿಗಾಗಿ ಗುಳೆ ಹೋಗುತ್ತಿದ್ದಾರೆ.