ಬೀದರ್: ಗುಟುಕು ನೀರಿಗಾಗಿ ಜೀವದ ಹಂಗು ತೊರೆದು ಬಾವಿಯಿಂದ ನೀರು ಸೇದುತ್ತಿರುವ ಸಾಹಸಮಯ ದೃಶ್ಯಗಳು ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೆಗಾಂವ್ ಗ್ರಾಮದಲ್ಲಿ ಕಂಡು ಬಂದಿದೆ.
ಚಿಮ್ಮೆಗಾಂವ್ ಗ್ರಾಮದಲ್ಲಿ ಸುಮಾರು 70 ರಿಂದ 80 ಕುಟುಂಬಗಳು ವಾಸವಾಗಿದ್ದು, ಈ ಗ್ರಾಮದಲ್ಲಿ ಜಾನುವಾರಗಳು ಸೇರಿದಂತೆ ಮನುಷ್ಯ ಕುಲಕ್ಕೆ ನೀರಿನ ದಾಹ ತಣಿಸಲು ಒಂದೇ ಬಾವಿ ಇದೆ. ಪ್ರತಿದಿನ ಒಂದು ಕೊಡ ನೀರಿಗಾಗಿ ಗ್ರಾಮಸ್ಥರು ಕಿತ್ತಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜನರು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದಾರೆ. ಜನರು ಬಾವಿ ಸುತ್ತ ನಿಂತುಕೊಂಡು ಹಗ್ಗಕ್ಕೆ ಬಿಂದಿಗೆ ಕಟ್ಟಿಕೊಂಡು ಆಳವಾದ ಬಾವಿಗೆ ಬಿಟ್ಟು ನೀರು ಸೇದುತ್ತಿರುವುದನ್ನು ಕಾಣಬಹುದಾಗಿದೆ. ಬಾವಿ ಮೇಲೆ ನಿಂತಿರುವ ಜನರಿಗೆ ಯಾವುದೇ ರೀತಿ ಸುರಕ್ಷತೆಯೂ ಇಲ್ಲ.
ಒಂದು ವೇಳೆ ನಿಂತಿರುವ ಜನರು ಸಮತೋಲನ ಕಳೆದುಕೊಂಡರೆ 50 ಅಡಿ ಆಳದ ಬಾವಿಗೆ ಬೀಳಬೇಕಾಗುತ್ತಿದೆ. ಇಂತಹ ಭೀಕರ ಬರಗಾಲ ಎದುರಾದರೂ ಗ್ರಾಮಸ್ಥರಿಗೆ ನೀರು ಕೊಡಲು ಜಿಲ್ಲಾಡಳಿತ ವಿಫಲವಾಗಿದೆ.