ಬೀದರ್: ಗಡಿ ಜಿಲ್ಲೆಯಲ್ಲಿ ಹನಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಮಧ್ಯೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.
ಬೀದರ್ ತಾಲೂಕಿನ ಮರಕಲ್ ಗ್ರಾಮದ ಪಾಟೀಲ್ ಗಲ್ಲಿಯಲ್ಲಿ ಸತತ ಎರಡು ದಿನಗಳಿಂದ ಕುಡಿಯುವ ನೀರು ಚರಂಡಿ ಸೇರುತ್ತಿದೆ. ಪಂಚಾಯ್ತಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯಕ್ಕೆ ನಲ್ಲಿಯ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಕುಡಿಯುವ ನೀರು ಸತತವಾಗಿ ಎರಡು ದಿನಗಳಿಂದ ಚರಂಡಿ ಪಾಲಾಗುತ್ತಿದ್ದರೂ ಯಾವ ಅಧಿಕಾರಿಗಳು ಕೂಡ ಈ ಬಗ್ಗೆ ಗಮನ ಹರಿಸಿಲ್ಲ. ನೀರನ್ನು ಪೋಲಾಗದಂತೆ ನಿಲ್ಲಿಸುವ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ನೀರು ಈಗ ರಸ್ತೆಯನ್ನು ಆವರಿಸಿಕೊಂಡಿದೆ.
ಈ ಕ್ಷೇತ್ರದ ಶಾಸಕರು ಮಾಜಿ ಸಚಿವರಾದ ರಹೀಂ ಖಾನ್ ಮಾತ್ರ ಇದಕ್ಕೂ ನಮಗೂ ಸಂಭಂದವಿಲ್ಲವೆಂದು ಎಂದು ಕಣ್ಮರೆಯಾಗಿದ್ದಾರೆ. ಅತೀ ಭೀಕರ ಬರಗಾಲಕ್ಕೆ ಗಡಿ ಜಿಲ್ಲೆ ತತ್ತರಿಸಿ ಹೋಗಿರುವಾಗ ಈ ರೀತಿ ನಿರ್ಲಕ್ಷ್ಯದಿಂದ ಜನರ ಸಮಸ್ಯೆಗಳು ದುಪ್ಪಟ್ಟಾಗುತ್ತಿದೆ. ಆದ್ದರಿಂದ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ.