ರಸ್ತೆ ಮಧ್ಯೆ ಕುಡಿಯುತ್ತ ಕುಳಿತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಪುಂಡರು

Public TV
1 Min Read
MND HALLE

ಮಂಡ್ಯ: ರಸ್ತೆಯ ಮಧ್ಯದಲ್ಲಿ ಕುಡಿಯುತ್ತ ಕುಳಿತಿದ್ದನ್ನು ಪ್ರಶ್ನಿಸಿದ ಕೆಎಸ್ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಬಳಿ ನಡೆದಿದೆ.

ಚಾಲಕ ಮಾದೇಗೌಡ ಮತ್ತು ನಿರ್ವಾಹಕ ಸ್ವಾಮೀಗೌಡ ಹಲ್ಲೆಗೊಳಗಾಗಿದ್ದಾರೆ. ಮಂಗಳವಾರ ರಾತ್ರಿ ಹೆಬ್ಬಾಡಿ ಮತ್ತು ಮೈಸೂರು ಮಾರ್ಗವಾಗಿ ಬಸ್ ಪ್ರಯಾಣಿಸುತ್ತಿತ್ತು, ಈ ವೇಳೆ ಹಂಪಾಪುರ ಬಳಿ ರಸ್ತೆ ಮಧ್ಯದಲ್ಲೇ ಕುಡಿಯುತ್ತ ಕುಳಿತಿದ್ದ ಯುವಕರ ಗುಂಪನ್ನು ನೋಡಿ, ದಾರಿ ಬಿಡುವಂತೆ ಚಾಲಕ ಮತ್ತು ನಿರ್ವಾಹಕರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರ ತಂಡ, ಚಾಲಕ ನಿರ್ವಾಹಕ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಬಸ್‍ನ ಗಾಜಿಗೆ ಕಲ್ಲು ತೂರಿ ಒಡೆದು ಹಾಕಿದ್ದಾರೆ.

mnd 08 halle 1

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಕೆರೆ ಸಬ್ ಇನ್ಸ್​ಪೆಕ್ಟರ್ ನೇತೃತ್ವದ ತಂಡ ಹಲ್ಲೆ ಮಾಡಿದ್ದ ಮೂವರು ಯುವಕರನ್ನು ವಶಕ್ಕೆ ಪಡೆದಿದ್ದು, ಪರಾರಿಯಾದ 7 ಜನ ಯುವಕರ ಪತ್ತೆಗೆ ಬಲೆ ಬೀಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿದ್ದ ಚಾಲಕ ಹಾಗೂ ನಿರ್ವಾಹಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಚಾಲಕ ಮಾದೇಗೌಡ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *