ಬೆಂಗಳೂರು: ಕಂಠಪೂರ್ತಿ ಕುಡಿದು ಸೈರನ್ ಹಾಕೊಂಡು ತಮಗೆ ತೋಚಿದಂತೆ ಓಡಾಡೋ ಆಂಬುಲೆನ್ಸ್ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೇ ವಾರದಲ್ಲಿ ರಾತ್ರಿ ಡ್ರಿಂಕ್ ಅಂಡ್ ಡ್ರೈವ್ ತಡೆ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕ ಸಿಕ್ಕಿಬಿದ್ದಿದ್ದಾನೆ.
ಕೆ.ಆರ್. ಪುರಂನ ಸತ್ಯಸಾಯಿ ಅರ್ಥೋಪೆಡಿಕ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ಗೆ ಸೇರಿದ ಆಂಬುಲೆನ್ಸ್ ಚಾಲಕ ಮಹೇಶ್ ಎಂದು ಗುರುತಿಸಲಾಗಿದ್ದು, ಈತ ಈಜಿಪುರದಿಂದ ರೋಗಿಯನ್ನು ಆಂಬುಲೆನ್ಸ್ ನಲ್ಲಿ ಮಡಿಕೇರಿಗೆ ಕರೆದೊಯ್ಯುತ್ತಿದ್ದ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಬರುವಾಗ ಬಿಡದಿ ಬಳಿ ಕುಡಿದು ಸೈರನ್ ಬಳಸಿಕೊಂಡು ಚಾಲನೆ ಮಾಡುತ್ತಿದ್ದನು.
ಹಲಸೂರು ಗೇಟ್ ಮಾರ್ಗದಲ್ಲಿ ಇನ್ಸ್ಪೆಕ್ಟರ್ ಮಹಮ್ಮದ್ ಆಂಬುಲೆನ್ಸ್ ಅನ್ನು ತಡೆದು ತಪಾಸಣೆ ನಡೆಸಿದಾಗ ಚಾಲಕನ ಕುಡಿದಿರುವುದು ತಿಳಿದಿದೆ. ನಂತರ ಪೊಲೀಸರು ಆಂಬುಲೆನ್ಸ್ ಅನ್ನು ವಶಕ್ಕೆ ಪಡೆದು ಚಾಲಕ ಮಹೇಶ್ಗೆ ದಂಡ ಹಾಕಿದ್ದಾರೆ.