ಬೆಂಗಳೂರು: ಕೈದಿಗಳ ಮನ ಪರಿವರ್ತನೆಗೆ ಜೈಲಿನಲ್ಲಿ ವಿವಿಧ ಕಲೆ, ಶಿಕ್ಷಣ, ಶ್ರಮ ಹಾಗೂ ಅಧ್ಯಯನಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಈ ರೀತೀಯ ಪ್ರೋತ್ಸಾಹ ಪಡೆದುಕೊಂಡ ಕರ್ನಾಟಕದ ಕೈದಿಗಳು ಮುಂಬೈನಲ್ಲಿ ನಾಟಕದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.
ಮುಂಬೈನ ಮೈಸೂರು ಅಸೋಸಿಯೇಷನ್ ಎರಡು ದಿನಗಳ ನಾಟಕೋತ್ಸವ ಆಯೋಜಿಸಿತ್ತು. ಇದರ ಅಧ್ಯಕ್ಷತೆಯನ್ನು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ವಿ ಹೊಸೂರ್ ಅವರು ವಹಿಸಿಕೊಂಡಿದ್ದರು. ಈ ನಾಟಕೋತ್ಸವದಲ್ಲಿ ಕರ್ನಾಟಕದ ಕೈದಿಗಳು ಭಾಗವಹಿಸಿ ಸಾಹಿತಿಗಳಾದ ಜಯಂತ್ ಕಾಯ್ಕಿಣಿ ಹಾಗೂ ಚಂದ್ರಶೇಖರ್ ಕಂಬಾರ ಅವರು ರಚಿಸಿದ ನಾಟಕ ಪ್ರದರ್ಶನ ಮಾಡಿದ್ದಾರೆ.
ನಾಟಕ ಪ್ರದರ್ಶನದ ಮೊದಲ ದಿನ (ಶನಿವಾರ) ಸಾಹಿತಿ ಜಯಂತ್ ಕಾಯ್ಕಿಣಿ ರಚಿಸಿರುವ ಹಾಗೂ ಹುಲಿಗೆಪ್ಪ ಕಟ್ಟಿಮನಿ ನಿರ್ದೇಶಿಸಿದ ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನವನ್ನು ಕೈದಿಗಳು ನೀಡಿದರು. ಇದಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಅಷ್ಟೇ ಪ್ರಮಾಣದಲ್ಲಿ ಭಾನುವಾರ ಪ್ರದರ್ಶನ ಕಂಡ ಚಂದ್ರಶೇಖರ್ ಕಂಬಾರ ಅವರು ರಚಿಸಿದ ‘ಸಂಗ್ಯಾ ಬಾಳ್ಯ’ ನಾಟಕ ಅದ್ಭುತವಾಗಿ ಹೊರ ಹೊಮ್ಮಿತು.
ಈ ನಾಟಕ ಪ್ರದರ್ಶನದಲ್ಲಿ ಕರ್ನಾಟಕದ ಒಟ್ಟು ಐವತ್ತು ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 30 ಮಂದಿ ಕೈದಿಗಳು ಹಾಗೂ ಜೈಲಿಂದ ಬಿಡುಗಡೆ ಆಗಿರುವವರು ಕೂಡ ನಾಟಕದಲ್ಲಿ ಇದ್ದರು. ಕರ್ನಾಟಕ ಕಾರಾಗೃಹ ಇಲಾಖೆ ಹಾಗೂ ಮುಂಬೈನ ಕಾರಾಗೃಹ ಅಧಿಕಾರಿಗಳ ಸಹಕಾರದಿಂದ ಎರಡು ನಾಟಕೋತ್ಸವ ಯಶಸ್ವಿಯಾಗಿ ಪ್ರದರ್ಶನ ಕಂಡವು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv