ಬಾಗಲಕೋಟೆ: ನಾಟಕ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಲಾವಿದೆ ಜೊತೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬ ಚಪ್ಪಲಿ ಏಟು ತಿಂದ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಹಿಪ್ಪರಗಿ ಗ್ರಾಮದಲ್ಲಿ “ಸೇಡಿಗಾಗಿ ಸಿಡಿದೆದ್ದ ಬಡವ” ಎಂಬ ನಾಟಕ ಪ್ರದರ್ಶನ ನಡೆಯುತ್ತಿತ್ತು. ನಾಟಕಕ್ಕೂ ಮುನ್ನ ಹಿಪ್ಪರಗಿ ಗ್ರಾಮದ ನಿವಾಸಿ ಬಸವರಾಜ್ ನಾಟಕ ಕಲಾವಿದೆ ರೇಖಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ನನ್ನನ್ನು ಚುಂಬಿಸಲು ಬಂದಿದ್ದ ಎಂದು ಆರೋಪಿಸಿ ಕಲಾವಿದೆ ಬಸವರಾಜ್ಗೆ ಚಪ್ಪಲಿಯಿಂದ ಭರ್ಜರಿಯಾಗಿ ಥಳಿಸಿದ್ದಾರೆ. ಇದನ್ನೂ ಓದಿ:ನಾಟಕದ ವೇದಿಕೆಯ ಮೇಲೆಯೇ ಮೈ ಮರೆತು ಜೋಡಿಯಿಂದ ಲಿಪ್ಲಾಕ್
ಬಳಿಕ ಈ ವಿಷಯ ತಿಳಿದ ಗ್ರಾಮಸ್ಥರು ಇಂದು ಬೆಳಿಗ್ಗೆ ಇದೇ ವಿಚಾರವಾಗಿ ಗುರುಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಕೂಡ ಯುವಕನಿಗೆ ಕಲಾವಿದೆ ಚಪ್ಪಲಿ ಏಟು ನೀಡಿದ್ದಾರೆ. ನಂತರ ಗ್ರಾಮಸ್ಥರು ಯುವಕನಿಗೆ ಬುದ್ಧಿವಾದ ಹೇಳಿ, ಕಲಾವಿದೆಯ ಕಾಲಿಗೆ ಬೀಳಿಸಿ, ಕ್ಷಮೆ ಕೇಳಿಸಿ, ಪರಿಸ್ಥಿತಿ ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.