– ಗುರುತಿನ ಚೀಟಿಗಾಗಿ ಮಹಿಳೆಯರ ಹೋರಾಟ
– ತುರ್ತು ಸಭೆ ಕರೆದು ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಡಿಸಿ
ರಾಯಚೂರು: ಗುರುತಿನ ಚೀಟಿಗಾಗಿ ಮೈಮೇಲೆ ಚರಂಡಿ ನೀರು ಸುರಿದುಕೊಂಡು ಸಫಾಯಿ ಕರ್ಮಚಾರಿಗಳು ಪ್ರತಿಭಟನೆ ನಡೆಸಿದ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ.
ಸಫಾಯಿ ಕರ್ಮಾಚಾರಿ ಗೀತಾ ಸಿಂಗ್ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಮಹಿಳೆಯರು ಚರಂಡಿ ನೀರಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಗೀತಾ ಸಿಂಗ್ ಮೈಮೇಲೆ ಚರಂಡಿ ನೀರನ್ನು ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗು ಪ್ರವೇಶಿಸಿ ಅಪವಿತ್ರವಾಯ್ತೆಂದು ಪೋಷಕರಿಗೆ ದೇಗುಲ ಶುದ್ಧೀಕರಣದ ಜೊತೆಗೆ 10 ಸಾವಿರ ದಂಡ!
ಕೆಪಿಸಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುವವರಿಗೆ ಗುರುತಿನ ಚೀಟಿ ನೀಡಲಾಗಿದೆ. ಕಷ್ಟಪಟ್ಟು ದುಡಿಯುವ ನಿಜವಾದ ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡಿಲ್ಲ ಅಂತ ಆರೋಪಿಸಿದ್ದಾರೆ. ಗುರುತಿನ ಚೀಟಿ ಇಲ್ಲದಿದ್ದರಿಂದ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಅಂತ ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ಮುಂದೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ನನಗೆ ಅವರ ಹೆಸರು ಹೇಳೋಕೆ ಬೇಜಾರಾಗುತ್ತೆ – ಸಿಂಧೂರಿ ವಿರುದ್ಧ ಸಾರಾ ಮಹೇಶ್ ಪರೋಕ್ಷ ವಾಗ್ದಾಳಿ
ಘಟನೆ ಹಿನ್ನೆಲೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಸಫಾಯಿ ಕರ್ಮಚಾರಿಗಳ ತುರ್ತು ಸಭೆ ಕರೆದು ಕುಂದು ಕೊರತೆ ಆಲಿಸಿದರು. 80 ಜನರಿಗೆ ಗುರುತಿನ ಚೀಟಿ ನೀಡುವ ಕುರಿತು ವಿಶೇಷ ವರದಿ ನೀಡಲು ನಗರಾಭಿವೃದ್ದಿ ಯೋಜನಾಧಿಕಾರಿಗೆ ಡಿ.ಸಿ ಖಡಕ್ ಸೂಚನೆ ನೀಡಿದರು ಮತ್ತು ಕೂಡಲೇ ಗುರುತಿನ ಚೀಟಿ ಸಿಗಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.