ಧಾರವಾಡ: ಯಾರದೋ ತಪ್ಪಿಗೆ ಇಲ್ಲಿ ಯಾರೋ ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ. ಹೌದು, ಧಾರವಾಡದ ಶೆಟ್ಟರ ಕಾಲೋನಿಯಲ್ಲಿ ಆಂಜನೇಯ ದೇವಸ್ಥಾನಕ್ಕೆ ಚರಂಡಿ ನೀರು ನುಗ್ಗಿ ಭಕ್ತರು ತೊಂದರೆ ಅನುಭವಿಸುವಂತಾಗಿದೆ.
ದೇವಸ್ಥಾನಕ್ಕೆ ಚರಂಡಿ ನೀರು ಹರಿದು ಬಂದಿರುವುದರಿಂದ ಆ ಬಡಾವಣೆಯ ಜನರು ಹಾಗೂ ದೇವಸ್ಥಾನದವರು ಬೇಸತ್ತು ಹೋಗಿದ್ದಾರೆ. ಬಿಆರ್ ಟಿಎಸ್ ರಸ್ತೆ ಕಾಮಗಾರಿ ಯೋಜನೆಯಿಂದಾಗಿ ಚರಂಡಿ ನೀರು ಹರಿಬರುತ್ತಿದೆ ಅಂತ ಭಕ್ತರು ಆರೋಪಿಸಿದ್ದಾರೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಮಳೆಯಾದಾಗೊಮ್ಮೆ ಚರಂಡಿ ನೀರು ದೇವಸ್ಥಾನದಲ್ಲೇ ನುಗ್ಗಿದೆ. ಈ ವಿಚಾರವನ್ನು ರಸ್ತೆ ಕಾಮಗಾರಿ ಮಾಡುವವರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ವಿಷಾದ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆಗಂತೂ ಏನ್ ಹೇಳೋದು. ಅವರು ಯಾವತ್ತೂ ಇತ್ತ ಬರುವುದೇ ಇಲ್ಲ. ಪಾಲಿಕೆಗೆ ಹೇಳಿದರೆ ರಸ್ತೆ ಕಾಮಗಾರಿಯವರ ಹೆಗಲಿಗೆ ಹಾಕುತ್ತಾರೆ. ಅಲ್ಲದೇ ದೇವಸ್ಥಾನದ ಭಕ್ತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.